Loading..

ಜುಲೈ 9ರ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಿ!

ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲು ಜನತೆಗೆ ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಮನವಿ

ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು (ಜೆಸಿಟಿಯು) 2025ರ ಜುಲೈ 9 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ‘ಸಂಯುಕ್ತ ಕಿಸಾನ್ ಮೋರ್ಚಾ’ (SKM) ಈ ಸಾರ್ವತ್ರಿಕ ಮುಷ್ಕರಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ. ದುಡಿಯುವ ಜನತೆಯ ಈ ಕೆಳಗಿನ ಬೇಡಿಕೆಗಳನ್ನು ಈ ಮುಷ್ಕರವು ಎತ್ತಿಹಿಡಿದಿದೆ:
• ಹೋರಾಟದಿಂದ ಗಳಿಸಿದ್ದ 29 ಕಾರ್ಮಿಕ ಕಾನೂನುಗಳನ್ನು ಹಿಂಪಡೆದು ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ, ಬಂಡವಾಳಶಾಹಿ ಪರ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ!
• ಸಾರ್ವಜನಿಕ ವಲಯಗಳು ಮತ್ತು ಸರ್ಕಾರಿ ಉದ್ಯಮಗಳ ಖಾಸಗೀಕರಣವನ್ನು ನಿಲ್ಲಿಸಿ.
• ಖಾಸಗೀಕರಣದ ಹೊಸ ಸ್ವರೂಪವಾದ ‘ರಾಷ್ಟ್ರೀಯ ಮಾನಿಟೈಸೇಷನ್ ಪೈಪ್‌ಲೈನ್’ ಅನ್ನು ರದ್ದುಗೊಳಿಸಿ.
• ವಿದ್ಯುತ್ (ತಿದ್ದುಪಡಿ) ಮಸೂದೆ -2023ನ್ನು ಹಿಂಪಡೆಯಿರಿ ಮತ್ತು ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯನ್ನು ನಿಲ್ಲಿಸಿ.
• ಕೆಲಸದ ಸಮಯವನ್ನು ಹೆಚ್ಚಿಸದಿರಿ – ದಿನಕ್ಕೆ 8 ಗಂಟೆ ಮತ್ತು ವಾರಕ್ಕೆ 48 ಗಂಟೆಗಳ ಕೆಲಸದ ಅವಧಿಯನ್ನು ಖಾತ್ರಿಪಡಿಸಿ.
• ಶಾಶ್ವತ ಉದ್ಯೋಗಗಳ ಕಡಿತಗೊಳಿಸುವಿಕೆಯನ್ನು ಕೈಬಿಡಿ.
• ನೌಕರ ವಿರೋಧಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ/ಏಕೀಕೃತ ಪಿಂಚಣಿ ಯೋಜನೆಗಳನ್ನು ಹಿಂಪಡೆಯಿರಿ ಮತ್ತು ಬೇಷರತ್ತಾಗಿ ಎಲ್ಲಾ ಪಿಂಚಣಿದಾರರಿಗೆ ‘ಹಳೆಯ ಪಿಂಚಣಿ ಯೋಜನೆ’ (OPS) ಯನ್ನು ಜಾರಿಗೊಳಿಸಿ.
• ಗುತ್ತಿಗೆ ಪದ್ಧತಿ, ಅನಿಗದಿತ ಅವಧಿಯ ಕೆಲಸ ಮತ್ತು ‘ನಿಶ್ಚಿತಾವಧಿ ಉದ್ಯೋಗ’ದಂತಹ ಕರಾಳ ಕ್ರಮಗಳನ್ನು ನಿಲ್ಲಿಸಿ.
• ಎಲ್ಲಾ ಸ್ಕೀಂ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಮತ್ತು ಅದಕ್ಕೆ ಅನುಗುಣವಾಗಿ ಅವರಿಗೆ ಎಲ್ಲಾ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಿ.
• ಎಲ್ಲಾ ವಲಸೆ ಕಾರ್ಮಿಕರಿಗೆ ಸುರಕ್ಷತೆ, ಭದ್ರತೆ ಮತ್ತು ದುಡಿಮೆಗೆ ತಕ್ಕ ವೇತನ ನೀಡಬಲ್ಲ ಶಾಶ್ವತ ಉದ್ಯೋಗ ಒದಗಿಸಿ.
• ಅಸಂಘಟಿತ ವಲಯದ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಗಳನ್ನು ರಚಿಸಿ ಮತ್ತು ಅವರಿಗೆ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಿ.
• ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ ಮತ್ತು ಅವರಿಗೆ ಎಲ್ಲಾ ಕಾರ್ಮಿಕ ಕಾನೂನುಗಳ ಅನ್ವಯವನ್ನು ಖಚಿತಪಡಿಸಿ.
• ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿ, ಉದ್ಯೋಗ ನೀಡುವವರೆಗೂ ನಿರುದ್ಯೋಗ ಭತ್ಯೆ ನೀಡಿ.
• ಕೆಲಸ ಮಾಡುವ ಹಕ್ಕನ್ನು ಎಲ್ಲರಿಗೂ ಮೂಲಭೂತ ಸಾಂವಿಧಾನಿಕ ಹಕ್ಕನ್ನಾಗಿ ಮಾಡಿ.
• ಕಾರ್ಮಿಕರಿಗೆ ಯೂನಿಯನ್ ರೂಪಿಸಿಕೊಳ್ಳುವ ಹಕ್ಕು ಹಾಗೂ ಪ್ರಜಾತಾಂತ್ರಿಕ ಹಕ್ಕುಗಳನ್ನು ಖಾತ್ರಿಪಡಿಸಿ.
ಸಾರ್ವತ್ರಿಕ ಮುಷ್ಕರವು ಈ ಕೆಳಗಿನ ಬೇಡಿಕೆಗಳನ್ನು ಸಹ ಒಳಗೊಂಡಿದೆ:
• ಆಹಾರ, ಔಷಧ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಒಳಗೊಂಡಂತೆ ಎಲ್ಲಾ ಸರಕುಗಳ ತೀವ್ರ ಬೆಲೆ ಏರಿಕೆಯನ್ನು ತಡೆಗಟ್ಟಿ.
• 700 ಕ್ಕೂ ಹೆಚ್ಚು ರೈತರು ತಮ್ಮ ಅಮೂಲ್ಯ ಜೀವಗಳನ್ನು ತ್ಯಾಗ ಮಾಡಿದ, ಒಂದು ವರ್ಷದ ಐತಿಹಾಸಿಕ ರೈತ ಆಂದೋಲನದ ಒತ್ತಡದಿಂದ ಕೇಂದ್ರ ಸರ್ಕಾರವು ಈಗಾಗಲೇ ಹಿಂಪಡೆದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಬಾಗಿಲಿನಿಂದ ಜಾರಿಗೊಳಿಸಲಾಗುತ್ತಿದೆ. ಇದರ ಷಡ್ಯಂತ್ರವಾಗಿರುವ ರೈತ ವಿರೋಧಿ ‘ಕೃಷಿ ಮಾರುಕಟ್ಟೆ ಕುರಿತ ಕರಡು ರಾಷ್ಟ್ರೀಯ ನೀತಿ’ಯನ್ನು ರದ್ದುಗೊಳಿಸಿ.
• ‘ಅ 2 + 50%’ ಸೂತ್ರದ ಆಧಾರದ ಮೇಲೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆಯನ್ನು (MSP) ನಿಗದಿಪಡಿಸಿ.
• ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಹಿಂಪಡೆಯಿರಿ – ಇದು ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಕೇಂದ್ರೀಕರಿಸಲು, ವಾಣಿಜ್ಯೀಕರಣಗೊಳಿಸಲು ಮತ್ತು ಕೋಮುವಾದೀಕರಣಗೊಳಿಸಲು ಇರುವ ಫ್ಯಾಸಿಸ್ಟ್ ವಿನ್ಯಾಸವಾಗಿದೆ.
• ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಮತ್ತು ಅಪರಾಧಗಳನ್ನು ತಡೆಗಟ್ಟಿ.
• ಸಮಾಜದ ನೈತಿಕತೆಯನ್ನು ನಾಶಗೊಳಿಸುವ, ಜನಸಾಮಾನ್ಯರ ಮನುಷ್ಯತ್ವವನ್ನೇ ಕಸಿಯುವ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರ ನೈತಿಕ ಬೆನ್ನೆಲುಬನ್ನು ಮುರಿಯುವ ಸಮೂಹ ಮಾಧ್ಯಮಗಳಲ್ಲಿನ ಅಶ್ಲೀಲತೆಯ ಪ್ರಸಾರವನ್ನು ಮದ್ಯ ಉತ್ಪನ್ನಗಳು, ಮಾದಕ ದ್ರವ್ಯಗಳ ಮಾರಾಟವನ್ನು ನಿಲ್ಲಿಸಿ.
ಸ್ನೇಹಿತರೇ, ದೇಶವು ಸ್ವಾತಂತ್ರ್ಯವನ್ನು ಗಳಿಸಿದ ನಂತರ ಕಳೆದ ಸುಮಾರು ೭೮ ವರ್ಷಗಳ ಜೀವನದ ಕಹಿ ಅನುಭವಗಳು, ಪ್ರಬಲ ಸಂಘಟಿತ ಹೋರಾಟದ ಹೊರತು ದುಡಿಯುವ ಜನರಿಗೆ ಬೇರೆ ದಾರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ. ನಮ್ಮಂತಹ ಪ್ರಜಾಪ್ರಭುತ್ವದ ದೇಶದಲ್ಲಿ, ಅಸಂಖ್ಯಾತ ಬಡವರು ಮತ್ತು ಅತಿ ಶ್ರೀಮಂತರ ನಡುವಿನ ಅಂತರವು ವೇಗವಾಗಿ ಹೆಚ್ಚುತ್ತಿದೆ. ಕಾರ್ಮಿಕರ ಕಠಿಣ ಶ್ರಮದಿಂದ ಸೃಷ್ಟಿಸಲ್ಪಟ್ಟ ಶೇ 70ರಷ್ಟು ದೇಶದ ಸಂಪತ್ತಿನ ಒಡೆತನವನ್ನು ಜನಸಂಖ್ಯೆಯ ಶೇ 5ರಷ್ಟು ಜನರು ಹೊಂದಿದ್ದಾರೆ. ಕೆಳಮಟ್ಟದ ಶೇ 50% ಜನರು ಕೇವಲ 3% ಸಂಪತ್ತನ್ನು ಹಂಚಿಕೊಂಡಿದ್ದಾರೆ. ಈ ಗಂಭೀರ ಪರಿಸ್ಥಿತಿಯಲ್ಲಿ, ಸಾರ್ವತ್ರಿಕ ಮುಷ್ಕರದ ಕರೆಯು ಅಪಾರ ಮಹತ್ವ ಹೊಂದಿದೆ.
ಆದರೆ, ಪ್ರಬಲ ಸಂಘಟಿತ ಚಳುವಳಿಗಳನ್ನು ಅಭಿವೃದ್ಧಿಪಡಿಸಲು, ದುಡಿಯುವ ಜನರು – ಕಾರ್ಮಿಕರು, ಕೃಷಿ ಕಾರ್ಮಿಕರು, ಬಡ ರೈತರು, ಗ್ರಾಮೀಣ ಮತ್ತು ನಗರ ಕೆಳ ಮಧ್ಯಮ ವರ್ಗ, ಸಾಮಾನ್ಯ ಮಧ್ಯಮ ವರ್ಗ – ಧರ್ಮ, ಜಾತಿ, ಭಾಷೆ, ಪ್ರದೇಶ, ಜನಾಂಗ ಇತ್ಯಾದಿಗಳ ಭೇದವಿಲ್ಲದೆ ಹೋರಾಟದಲ್ಲಿ ಒಂದಾಗುವುದು ಅತ್ಯಗತ್ಯ. ಆಡಳಿತಾರೂಢ ಬಂಡವಾಳಶಾಹಿ ವರ್ಗ ಮತ್ತು ಅದರ ಬಾಲಂಗೋಚಿ ಸರ್ಕಾರಗಳು ತಮ್ಮ ಲಾಭವನ್ನು ಹೆಚ್ಚಿಸುವ ವರ್ಗ ಹಿತಾಸಕ್ತಿಗಾಗಿ ಈ ಐಕ್ಯತೆಯನ್ನು ಮುರಿಯಲು ನಿರಂತರವಾಗಿ ಯತ್ನಿಸುತ್ತವೆ. ವಾಸ್ತವದಲ್ಲಿ, ನಿಜವಾದ ವಿಭಜನೆಯು ಶೋಷಕ ಮತ್ತು ಶೋಷಿತರ ನಡುವೆ, ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವೆ, ಶ್ರೀಮಂತ ಮತ್ತು ಬಡವರ ನಡುವೆ ಇದೆ. ಹಾಗಾಗಿ, ಎಲ್ಲಾ ವಿಭಾಗಗಳ ದುಡಿಯುವ ಜನರು ತಮ್ಮ ಐಕ್ಯತೆಯನ್ನು ಬಲಪಡಿಸಬೇಕು ಮತ್ತು ಅದನ್ನು ತಮ್ಮ ಕಣ್ಮಣಿಯಂತೆ ಕಾಪಾಡಿಕೊಳ್ಳಬೇಕು.
ಸ್ನೇಹಿತರೇ, ಸಾಮಾನ್ಯ ಜನರು ತಮ್ಮ ಹಿತಾಸಕ್ತಿಗಳನ್ನು ಆಳವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ತಮ್ಮ ದೇಶಪ್ರೇಮದ ಭಾವನೆಗಳನ್ನು ಆಳ್ವಿಕರು ರಾಷ್ಟ್ರೀಯ ಯುದ್ಧೋನ್ಮಾದವನ್ನು (jingoism) ಉತ್ತೇಜಿಸುವ ಮೂಲಕ ದುರುಪಯೋಗಪಡಿಸಿಕೊಳ್ಳುವುದನ್ನು ಅರಿಯಬೇಕು. ಇದು ವಿವಿಧ ದೇಶಗಳ ದುಡಿಯುವ ಜನರ ಒಗ್ಗಟ್ಟನ್ನು ಘಾಸಿಗೊಳಿಸುತ್ತದೆ. ಅಮೆರಿಕಾ ಬೆಂಬಲಿತ ಝಿಯೋನಿಸ್ಟ್ ಇಸ್ರೇಲ್, ಪ್ಯಾಲೆಸ್ತೀನ್ ಜನರ ಮೇಲೆ ಹೇರಿದ ಆಕ್ರಮಣಕಾರಿ ಯುದ್ಧ ಮತ್ತು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಅನುಭವಗಳು, ಯುದ್ಧದಿಂದ ಸಾಮಾನ್ಯ ಜನರ ಜೀವನ ಮತ್ತು ಜೀವನೋಪಾಯವು ನಾಶವಾಗುತ್ತದೆ ಎಂಬುದನ್ನು ಎಲ್ಲರಿಗೂ ಸಾಬೀತುಪಡಿಸಿವೆ. ಇಂದು ಬಂಡವಾಳಶಾಹಿ ವ್ಯವಸ್ಥೆಗೆ ಯುದ್ಧದ ಉದ್ವಿಗ್ನತೆಗಳು, ಸ್ಥಳೀಯ ಯುದ್ಧಗಳು ಬೇಕಾಗಿವೆ, ಆರ್ಥಿಕತೆಯ ಮಿಲಿಟರೀಕರಣದ ಬೇಳೆ ಬೇಯಿಸಿಕೊಳ್ಳಲು, ಯುದ್ಧೋನ್ಮಾದವನ್ನು ಸೃಷ್ಟಿಸುವ ಮೂಲಕ ಜನರ ಗಮನವನ್ನು ಜೀವನದ ಜ್ವಲಂತ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಮತ್ತು ಬೆರಳೆಣಿಕೆಯಷ್ಟು ಬಿಲಿಯನೇರ್‌ಗಳ ಅತಿ ಲಾಭದ ಗಳಿಕೆಗೆ ಇದು ಸಹಕಾರಿಯಾಗಿದೆಯಷ್ಟೆ.
ಆದ್ದರಿಂದ, ನಾವು ದುಡಿಯುವ ಜನರಿಗೆ ಮತ್ತು ಎಲ್ಲಾ ವರ್ಗಗಳ ಸಾಮಾನ್ಯ ಜನರಿಗೆ ಧರ್ಮ, ಜಾತಿ, ಭಾಷೆ, ಪ್ರದೇಶಗಳು, ಜನಾಂಗೀಯತೆ ಮುಂತಾದ ಭೇದವಿಲ್ಲದೆ ಸಾಮರಸ್ಯದಿಂದ ಒಂದಾಗಿ ನಿಲ್ಲುವಂತೆ ಮತ್ತು 9 ಜುಲೈ 2025ರ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು, ಇದರಿಂದಾಗಿ ತಮ್ಮ ಜೀವನದ ನ್ಯಾಯಯುತ ಬೇಡಿಕೆಗಳನ್ನು ಸಾಧಿಸಲು ಮತ್ತಷ್ಟು ವ್ಯಾಪಕ, ಸಂಘಟಿತ, ನಿರಂತರ ಮತ್ತು ಪ್ರಬಲ ಚಳುವಳಿಗಳಿಗೆ ದಾರಿ ಮಾಡಿಕೊಡುವಂತೆ, ಒಡಕು ಸೃಷ್ಟಿಸುವ ಮತ್ತು ಆಂದೋಲನ ವಿರೋಧಿ ಶಕ್ತಿಗಳ ಪಿತೂರಿಗಳನ್ನು ಸೋಲಿಸುವಂತೆ ಜನರಲ್ಲಿ ಮನವಿ ಮಾಡುತ್ತೇವೆ.