Loading..

ಜನಪರ ನೀತಿಗಳ ಜಾರಿಗೆ ಆಗ್ರಹಿಸಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ
ಕಾ.ಕೆ.ರಾಧಾಕೃಷ್ಣ

ಜನಪರ ನೀತಿಗಳ ಜಾರಿಗೆ ಆಗ್ರಹಿಸಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ
ಮೇ 14, 2025ರಂದು ನಮ್ಮ ಪಕ್ಷ ಎಸ್‌ಯುಸಿಐ (ಕಮ್ಯುನಿಸ್ಟ್) ಕರ್ನಾಟಕ ರಾಜ್ಯ ಸಮಿತಿಯು ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ, ಸರ್ಕಾರಿ ಶಿಕ್ಷಣ ಸಂಸ್ಥೆ-ಆಸ್ಪತ್ರೆಗಳಿಗೆ ಮೂಲ ಸೌಕರ್ಯ, ಉದ್ಯೋಗ ಖಾತ್ರಿ ಕೂಲಿ ದಿನಗಳನ್ನು 200 ದಿನಕ್ಕೆ ಹೆಚ್ಚಿಸುವುದು, ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, 6000 ಸರ್ಕಾರಿ ಶಾಲೆ ಮುಚ್ಚಬಾರದು, ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸುವುದು, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ಕಾರ್ಮಿಕರ ಸ್ಥಾನಮಾನ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ‘ಜನ ಹೋರಾಟ’ ವನ್ನು ಸಂಘಟಿಸಿತು.
ಕೇಂದ್ರದಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ದೇಶದ ಸಂಪತ್ತನ್ನು ಲಂಗು ಲಗಾಮಿಲ್ಲದೆ ಲೂಟಿ ಮಾಡಲು ಅಂಬಾನಿ-ಅದಾನಿಗಳಿಗೆ ಮಣೆ ಹಾಕಿ ದೇಶದ ಜನಸಾಮಾನ್ಯರನ್ನು ಹಸಿವೆ, ಬಡತನ, ನಿರುದ್ಯೋಗಕ್ಕೆ ತಳ್ಳುವ ನೀತಿಗಳನ್ನು ಅನುಸರಿಸುತ್ತಾ, ಅವುಗಳ ಬಗ್ಗೆ ಧ್ವನಿಯೆತ್ತುವವರ, ದಮನಿತರ ಜನತಾಂತ್ರಿಕ ಹಕ್ಕುಗಳನ್ನು ಹೊಸಕಿ ಹಾಕುತ್ತಿರುವಾಗ, ಇನ್ನೊಂದೆಡೆ ರಾಜ್ಯದಲ್ಲಿ ಬಿಜೆಪಿ ದುರಾಡಳಿತದಿಂದ ಬೇಸತ್ತ ಜನರಿಗೆ ಪರ್ಯಾಯವೆಂಬಂತೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳೇ ಜನಪರ ನೀತಿಗಳೆಂದು ಬಿಂಬಿಸುತ್ತಾ ಜನರ ಬದುಕನ್ನು ಮೇಲೆತ್ತುವ ಜವಾಬ್ದಾರಿಯನ್ನು ಕೈಗೊಳ್ಳದಿರುವ ಸಂದರ್ಭದಲ್ಲಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಈ ಜನ ಹೋರಾಟವನ್ನು ಕೈಗೆತ್ತಿಕೊಂಡಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಹಸ್ರಾರು ಜನರು ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುವಂತಹ ಮುಗಿಲು ಮುಟ್ಟುವ ಘೋಷಣೆಗಳನ್ನು ಕೂಗುವುದರ ಮೂಲಕ ಪ್ರತಿಭಟನೆ ಆರಂಭಗೊಂಡಿತು.

 

ಈ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾದ ಕಾ. ಕೆ. ರಾಧಾಕೃಷ್ಣ ಅವರು ಮಾತನಾಡುತ್ತಾ “ಜಗತ್ತಿನಾದ್ಯಂತ ಪರಿಸ್ಥಿತಿ ಗಂಭೀರವಾಗಿದೆ. ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಭಾರತ- ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಕಾರ್ಯಾಚರಣೆ, ಇಸ್ರೇಲ್-ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ನಡುವಿನ ಸಮರ ಮೊದಲಾದವು ಇಂತಹ ಯುದ್ಧಗಳಿಗೆ ಇತ್ತೀಚಿನ ಉದಾಹರಣೆಗಳು. ಇಸ್ರೇಲ್ – ಪ್ಯಾಲೇಸ್ತೀನ್ ನಡುವೆ ಕದನ ವಿರಾಮದ ನಡುವೆಯೂ ಗಾಜಾ ಪಟ್ಟಿಯ ಮೇಲೆ ನಿರಂತರ ದಾಳಿ ಮುಂದುವರೆದಿರುವುದು ಯುದ್ಧದ ಕಾರ್ಯಾಚರಣೆ ಜಾರಿಯಲ್ಲಿರುವುದನ್ನು ಸೂಚಿಸುತ್ತದೆ. ಭಯೋತ್ಪಾದನೆ ಮಟ್ಟಹಾಕುವ ಹೆಸರಿನಲ್ಲಿ ಇದೆಲ್ಲಾ ಜರುಗುತ್ತಿದೆ. ಭಯೋತ್ಪಾದನೆ ಕೆಟ್ಟದ್ದು, ಖಂಡನೀಯ. ಆದರೆ ಇದೆಲ್ಲಾ ಯಾಕೆ ನಡೆಯುತ್ತದೆ? ಮೇಲ್ನೋಟಕ್ಕೆ ಭಯೋತ್ಪಾದನೆ ಎಂದು ಕಂಡುಬಂದರೂ, ಇದರ ಹಿಂದೆ ಇರುವುದು ಮಾರುಕಟ್ಟೆ ಸಂಘರ್ಷ, ದೊಡ್ಡ ದೊಡ್ಡ ಬಂಡವಾಳಗಾರರ, ಮಾಲೀಕರ ನಡುವೆ ನಡೆಯುವ ಜಗಳ, ಲಾಭಕ್ಕಾಗಿ ನಡೆಯುವ ಕಚ್ಚಾಟ. ಇದಕ್ಕೂ ಜನರ ಹಿತಾಸಕ್ತಿಗೂ ಯಾವುದೇ ಸಂಬಂಧವಿಲ್ಲ” ಎಂದರು.

ಮುಂದುವರೆದು ಮಾತನಾಡಿದ ಅವರು, “ಇತ್ತೀಚೆಗೆ ಭಾರತ-ಪಾಕಿಸ್ತಾನದ ಮಧ್ಯ ಕದನ ವಿರಾಮದ ಹೆಸರಿನಲ್ಲಿ ಶಾಂತಿ ಪಾಠ ಮಾಡಲು ಬರುವ ಅಮೇರಿಕಾದ ಟ್ರಂಪ್ ಒಬ್ಬ ಕೊಲೆಗಡುಕ! ಪ್ಯಾಲೆಸ್ತೇನಿನ ಸಾವಿರಾರು ಜನರ ಕಗ್ಗೊಲೆಗೆ ಕಾರಣವಾದ ಅಮೆರಿಕಾ, ಭಾರತ ಪಾಕಿಸ್ತಾನದ ನಡುವೆ ಮೂಗು ತೂರಿಸಿದ್ದು ಕೇವಲ ಬೂಟಾಟಿಕೆ, ಇದು ಎರಡು ದೇಶಗಳ ನಡುವಿನ ವಿವಾದ, ಮೂರನೇ ದೇಶದ ಮಧ್ಯಸ್ಥಿಕೆ ಬೇಕಿರಲಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಆಸ್ಪದ ಮಾಡಿಕೊಟ್ಟಿದ್ದು ತಪ್ಪು” ಎಂದರು. “ದೇಶದ ಜನರಿಗೆ ಶಾಂತಿ ಬೇಕು. ನೆಮ್ಮದಿಯ ಬದುಕು ಬೇಕು. 

ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ
ಕಾ. ಕೆ.ಉಮಾ
ರಾಜ್ಯ ಸಮಿತಿ ಸದಸ್ಯರಾದ
ಕಾ. ರಾಮಾಂಜನಪ್ಪ ಆಲ್ದಳ್ಳಿ

 

ಆದರೆ ಬಂಡವಾಳಗಾರರು-ಸಾಮ್ರಾಜ್ಯಶಾಹಿಗಳಿಗೆ ಯುದ್ಧ ಬೇಕು, ಯುದ್ಧ ಇಲ್ಲದಿದ್ದರೆ ಅವು ಸಾಯುತ್ತವೆ. ಈ ದೇಶದ ಜನರ ಜೀವನ ಸಂಕಟಮಯವಾಗಿದೆ, ಇದಕ್ಕೆ ಸರ್ಕಾರಗಳ ಅದಾನಿ, ಅಂಬಾನಿ ಮುಂತಾದ ಕಾರ್ಪೊರೇಟ್‌ಗಳ ಪರ ನೀತಿಗಳೇ ಕಾರಣ. ಶೇ. 5 ರಷ್ಟು ಕೆಲವೇ ಜನ ದೇಶದ ಶೇ. 60 ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ, ಇನ್ನು ಬಹುಸಂಖ್ಯಾತ ಶೇ. 55 ರಷ್ಟು ಸಾಮಾನ್ಯ ಜನ ಕೇವಲ ಶೇ. 3 ರಷ್ಟು ಸಂಪತ್ತು ಹೊಂದಿದ್ದಾರೆ. ಹಸಿವೆ, ನಿರ್ಗತಿಕತನ, ನಿರುದ್ಯೋಗ ತಾಂಡವವಾಡುತ್ತಿವೆ. ಜನರ ಕೊಳ್ಳುವಶಕ್ತಿ ಅಂದರೆ ಮಾರುಕಟ್ಟೆ ಸಂಕುಚಿತಗೊಳ್ಳುತ್ತಿದೆ. ಅಂತೆಯೇ ದೇಶದೇಶಗಳ ಮಧ್ಯೆ ಮಾರುಕಟ್ಟೆ ಯುದ್ಧ ನಡೆಯುತ್ತಿದೆ. ಈ ತಿಕ್ಕಾಟವೇ ಎಲ್ಲದಕ್ಕೂ ಮೂಲ. ಮಾರುಕಟ್ಟೆ ಬಿಕ್ಕಟ್ಟಿನ ಶಮನಕ್ಕಾಗಿ ಮಿಲಿಟರೀಕರಣದ ಮೂಲಕ ಕೃತಕ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾರೆ. ಅಮೇರಿಕಾದಿಂದ ಹಿಡಿದು ಭಾರತದಂತಹ ದೊಡ್ಡ ದೊಡ್ಡ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಆರ್ಥಿಕತೆಯನ್ನು ಮಿಲಿಟರೀಕರಣಗೊಳಿಸಿವೆ. ಭಯೋತ್ಪಾದಕರನ್ನು, ಅಲ್ಲಿಂದ ಯುದ್ಧವನ್ನೂ ಸಹ ಇವರೇ ಹುಟ್ಟು ಹಾಕುತ್ತಾರೆ” ಎಂದರು.
ಅಂತೆಯೇ, “ಈ ಅನ್ಯಾಯ, ಅಸಮಾನತೆ ವಿರುದ್ಧ ರೈತ-ಕಾರ್ಮಿಕರು ಧ್ವನಿಯೆತ್ತದಂತೆ ಸರ್ಕಾರಗಳು ಅವರ ಬದುಕನ್ನು, ಬದುಕಿನ ಹಕ್ಕನ್ನು ನಿರ್ದಯವಾಗಿ ಕಿತ್ತುಕೊಳ್ಳುತ್ತಿವೆ. ಈ ಶೋಷಕ ವ್ಯವಸ್ಥೆಯ ವಿರುದ್ಧ ಬಲಿಷ್ಠ ಹೋರಾಟ ಕಟ್ಟುತ್ತಾ, ಅಂತಿಮವಾಗಿ ಶೋಷಣೆ, ದೌರ್ಜನ್ಯಗಳಿಲ್ಲದ ಸಮಾಜವಾದಿ ವ್ಯವಸ್ಥೆಯ ಕಡೆ ಆ ಹೋರಾಟಗಳನ್ನು ಬೆಳೆಸಬೇಕು” ಎಂದು ಅವರು ಕರೆ ನೀಡಿದರು.

ಪ್ರತಿಭಟನೆಯ ಮುಂಚೂಣಿಯಲ್ಲಿ ರಾಜ್ಯ ನಾಯಕರು

ಕೇಂದ್ರ ಸಮಿತಿ ಸದಸ್ಯರು ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಕಾ.ಕೆ.ಉಮಾರವರು ಈ ಜನ ಹೋರಾಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ದೇಶದಲ್ಲಿ ೨೦ ಕೋಟಿ ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, 7000 ಜನ ಹಸಿವೆಯಿಂದ ಸಾಯುತ್ತಿದ್ದಾರೆ, ಅವರಲ್ಲಿ ಮಕ್ಕಳ ಸಂಖ್ಯೆ 4000 ದಷ್ಟು ಇದೆ. ಪ್ರತಿ ೫ ಜನರಲ್ಲಿ 3 ಜನ ನಿರುದ್ಯೋಗಿಗಳು. ಒಂದೆಡೆ ಅದಾನಿ ಆಸ್ತಿ 11.5 ಲಕ್ಷ ಕೋಟಿ, ಅಂಬಾನಿಯದು 10.5 ಲಕ್ಷ ಕೋಟಿ ಇದೆ, ಆದರೆ ಜನ ಸಾಮಾನ್ಯ ದಿನಕ್ಕೆ ಕೇವಲ 33 ರೂ. ಸಂಪಾದಿಸುತ್ತಾನೆ. ಇಷ್ಟೊಂದು ಭಾರೀ ಅಸಮಾನತೆ ತಾಂಡವವಾಡುತ್ತಿದೆ. ವಿದ್ಯಾಭ್ಯಾಸ ದುಬಾರಿಯಾಗಿ ಬಡವರಿಗೆ ಸಿಗುತ್ತಿಲ್ಲ, ಇರುವ ಸರ್ಕಾರಿ ಶಾಲೆಗಳು ಸೌಕರ್ಯಗಳಿಲ್ಲದೆ ಮುಚ್ಚುತ್ತಿವೆ. 1 ವರ್ಷದಲ್ಲಿ 10,000 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಮಾನಸಿಕ ಖಿನ್ನತೆಯಿಂದ 2022ರಲ್ಲಿ 13,000 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. 11 ನಿಮಿಷಕ್ಕೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ಆಸ್ತಿಗಾಗಿ ಮಗ ತಂದೆಯನ್ನು ಸಾಯಿಸಿದ ಅಮಾನುಷ ಘಟನೆ ನಡೆದಿದೆ. ಬೆಲೆಗಳು ಗಗನಕ್ಕೇರುತ್ತಿವೆ, ಸರ್ಕಾರಿ ಆಸ್ಪತ್ರೆಗಳು ನರಕದ ಕೂಪಗಳಾಗಿವೆ. ಕೇವಲ ಎರಡೇ ವರ್ಷದಲ್ಲಿ 3000 ಬಾಣಂತಿಯರು ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಜನ ಹೋರಾಟ ಬೆಳೆಸುವುದು ಅನಿವಾರ್ಯವಾಗಿದೆ. ಆದರೆ ಅವರ ನಡುವೆ ಜಾತಿ-ಕೋಮಿನ ವಿಷಬೀಜ ಬಿತ್ತಿ ಒಗ್ಗಟ್ಟನ್ನು ಮುರಿಯಲಾಗುತ್ತಿದೆ. ಜನರು ಈ ಎಲ್ಲಾ ಭೇದ-ಭಾವಗಳನ್ನು ಮೀರಿ ಒಂದಾಗಿ ಹೋರಾಟಕ್ಕೆ ಮುಂದಾಗಬೇಕು” ಎಂದರು.
ರಾಜ್ಯ ಸೆಕ್ರೆಟೇರಿಯೆಟ್ ಸದಸ್ಯರಾದ ಕಾ. ರಾಮಾಂಜನಪ್ಪ ಮಾತನಾಡಿ, “ಅಧಿಕಾರದಲ್ಲಿರುವ ರಾಜ್ಯ-ಕೇಂದ್ರ ಸರ್ಕಾರಗಳು ಅಧಿಕಾರದ ಕಿತ್ತಾಟದಲ್ಲಿ ಮುಳುಗಿವೆ. ಚುನಾವಣೆ ಮೂಲಕ ಗದ್ದುಗೆಯೇರಲು ಕೆಳಮಟ್ಟದ ಪ್ರಚಾರದಲ್ಲಿ ತೊಡಗಿವೆ. 40% ಕಮಿಷನ್ ಬಿಜೆಪಿ ಸರ್ಕಾರ ಅಂತ ಹೇಳಿ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ 50% ಕಮಿಷನ್ ನಲ್ಲಿ ಮುಳುಗಿದ ಅಪಖ್ಯಾತಿಗೊಳಗಾಗಿದೆ. ಕೇವಲ ಗ್ಯಾರಂಟಿಗಳಿಂದ ಮಾತ್ರವೇ ಬಡವರ-ದುಡಿಯುವ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ನರೇಗಾಕ್ಕೆ ರೂ. 900 ಕೋಟಿ ಅನುದಾನ ಕಡಿತ ಮಾಡಿದೆ. ಉದ್ಯೋಗ ಸೃಷ್ಟಿಸಲಿಲ್ಲ. ಕೇಂದ್ರದಲ್ಲಿನ ಸರ್ಕಾರ ನೇರವಾಗಿ ದುಡಿಯುವ ಜನರ ಮೇಲೆ ಪ್ರಹಾರ ಮಾಡುತ್ತಿದೆ. ಇಲ್ಲಿ ಕಾಂಗ್ರೆಸ್ ಸರ್ಕಾರ ಸಹ ಅದಕ್ಕೆ ಭಿನ್ನವಾಗಿರದೆ, ರೈತ-ಕಾರ್ಮಿಕರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಈ ಎರಡೂ ಸರ್ಕಾರಗಳು ಮಾಲೀಕರ ಪರ ಸರ್ಕಾರಗಳು” ಎಂದು ಟೀಕಿಸಿದರು.
ಪ್ರಮುಖ ಬೇಡಿಕೆಗಳ ಮನವಿಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿಯೋಗವೊಂದು ಭೇಟಿ ಮಾಡಿ ಸಲ್ಲಿಸಿತು. ಈ ಜನಹೋರಾಟದ ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಕೆ.ಸೋಮಶೇಖರ್, ಎಂ. ಶಶಿಧರ್, ಎಂ. ಎನ್. ಶ್ರೀರಾಮ್, ಡಾ. ಟಿ. ಎಸ್. ಸುನೀತ್ ಕುಮಾರ್, ಬಿ. ಆರ್. ಅಪರ್ಣ, ವಿ. ಎನ್. ರಾಜಶೇಖರ್, ಬಿ. ರವಿ, ವಿ. ಜ್ಞಾನಮೂರ್ತಿ ಮುಂತಾದವರು ವಹಿಸಿದ್ದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನಸ್ತೋಮ

ಹಕ್ಕೊತ್ತಾಯಗಳು
• ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿಸಿರುವ ಎಲ್ಲಾ ಬೆಲೆಗಳನ್ನು ಈ ಕೂಡಲೇ ಹಿಂತೆಗೆದುಕೊಳ್ಳಿ.
• ಎಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ. ಜೊತೆಗೆ ಅವಶ್ಯಕ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿ.
• ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಕೆಲಸದ ದಿನಗಳನ್ನು 200 ಕ್ಕೆ ಹೆಚ್ಚಿಸಿ. ಅವರ ಕೂಲಿಯನ್ನು ರೂ. 600ಕ್ಕೆ ನಿಗದಿಗೊಳಿಸಿ.
• ಬೆಲೆಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯಕ್ಕೆ ಸರಕಾರದಿಂದ ನೆರವು ನೀಡಿ ಮತ್ತು ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸಿ.
• ವಿದ್ಯುತ್ ಮಸೂದೆ-2022(ತಿದ್ದುಪಡಿ)ನ್ನು ಹಿಂತೆಗೆದುಕೊಳ್ಳಿ. ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಿ.
• 6000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ಕೂಡಲೇ ಕೈಬಿಡಿ ಹಾಗೂ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು, ಶಿಕ್ಷಕ ಸಿಬ್ಬಂದಿಯನ್ನು ಒದಗಿಸಿ.
• ನಿರುದ್ಯೋಗದಿಂದ ತತ್ತರಿಸಿರುವ ಯುವಜನರಿಗೆ ಉದ್ಯೋಗ ನೀಡಲು ತಕ್ಷಣವೇ ಸರಕಾರಿ ಇಲಾಖೆಗಳ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಕೆ.ಪಿ.ಎಸ್.ಸಿ ಸೇರಿದಂತೆ ನೇಮಕಾತಿಯಲ್ಲಿ ನಡೆಯುವ ಎಲ್ಲಾ ಹಂತದ ಭ್ರಷ್ಟಾಚಾರವನ್ನು ಮಟ್ಟ ಹಾಕಿ.
• ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಘೋಷಿಸಿ. ಅಲ್ಲಿಯವರೆಗೆ ಕನಿಷ್ಠ ವೇತನ ಪಾವತಿಸಿ. ಎಲ್ಲಾ ಇಲಾಖೆಗಳಲ್ಲಿರುವ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ.
• ಈ ಕೂಡಲೇ ಹೆಚ್ಚಿಸಿರುವ ದುಬಾರಿ ಬೆಂಗಳೂರು ಮೆಟ್ರೋ ದರಗಳನ್ನು ಹಿಂತೆಗೆದುಕೊಳ್ಳಿ.
• ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರವೇ ಪಟ್ಟಾ ಒದಗಿಸಿ.
• ಮಕ್ಕಳ ಮಾನಸಿಕ ಆರೋಗ್ಯ ಮತ್ತು ವ್ಯಕ್ತಿತ್ವದ ಬೆಳವಣಿಗೆಯನ್ನು ಕಾಪಾಡಲು ಎಲ್ಲಾ ಆನ್‌ಲೈನ್ ಅಶ್ಲೀಲ ಕಾರ್ಯಕ್ರಮಗಳನ್ನು ಈ ಕೂಡಲೇ ನಿಲ್ಲಿಸಿ.