
ನ್ಯಾಯಮೂರ್ತಿ ಮನೆಯಲ್ಲಿ ಸುಟ್ಟ ನೋಟುಗಳು ಪತ್ತೆ : ಹಲವು ಸಂದೇಹ
ಮಾರ್ಚ್ 14ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯ ಆವರಣದ ಕೊಠಡಿಯೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ವೇಳೆಯಲ್ಲಿ ನಾಲ್ಕೈದು ಗೋಣಿ ಚೀಲಗಳಲ್ಲಿ ಅರ್ಧ ಸುಟ್ಟ ಕಂತೆ ನೋಟುಗಳು ಪತ್ತೆಯಾದವು.
ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ನ್ಯಾ. ವರ್ಮಾ ಅವರು ಪತ್ನಿಯೊಂದಿಗೆ ಭೋಪಾಲ್ನಲ್ಲಿದ್ದರು. ನ್ಯಾಯಮೂರ್ತಿಗಳ ದೆಹಲಿ ನಿವಾಸದಲ್ಲಿ ಅವರ ತಾಯಿ, ಮಗಳು ಹಾಗೂ ಮನೆ ಕೆಲಸದವರಿದ್ದರು. ಮಾರ್ಚ್ 22ರಂದು ಸುಪ್ರೀಂಕೋರ್ಟ್ ತನ್ನ ವೆಬ್ಸೈಟ್ನಲ್ಲಿ ಅಗ್ನಿಶಮನ ಕಾರ್ಯಾಚರಣೆಯ ವಿಡಿಯೊವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಕೊಠಡಿಯಲ್ಲಿ ಚೀಲಗಳಲ್ಲಿ ಬಚ್ಚಿಟ್ಟಿದ್ದ ನೋಟುಗಳ ಕಂತೆಗಳು ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮಾರ್ಚ್ 15ರಂದು ಲಕ್ನೋನಲ್ಲಿದ್ದ ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರಕುಮಾರ್ ಉಪಾಧ್ಯಾಯ ಅವರಿಗೆ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಕರೆ ಮಾಡಿ ಇಡೀ ಪ್ರಕರಣದ ಮಾಹಿತಿಯನ್ನು ನೀಡುತ್ತಾರೆ. ಜಸ್ಟೀಸ್ ವರ್ಮಾ ಅವರ ಮನೆಯಲ್ಲಿ ಸಿಕ್ಕ ದಾಖಲೆಯಿಲ್ಲದ ನೋಟುಗಳ ಮಾಹಿತಿ ಪಡೆದ ಸುಪ್ರೀಂಕೋರ್ಟ್ ಕೊಲಿಜಿಯಂ ನ್ಯಾ. ವರ್ಮಾ ಅವರನ್ನು ದೆಹಲಿ ಹೈಕೋರ್ಟ್ನಿಂದ ಅವರ ಮಾತೃ ನ್ಯಾಯಾಲಯವಾದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡುವ ಪ್ರಸ್ತಾವನೆಯನ್ನು ಇರಿಸುತ್ತದೆ. ಅಲ್ಲದೇ, ವರ್ಗಾವಣೆ ಪ್ರಕ್ರಿಯೆ ಸ್ವತಂತ್ರ ನಿರ್ಧಾರವಾಗಿದ್ದು, ನ್ಯಾಯಮೂರ್ತಿಯ ಮೇಲೆ ನೋಟು ಸಿಕ್ಕ ಪ್ರಕರಣಕ್ಕೆ ಸಂಬAಧಿಸಿ ನಡೆದಿರುವ ಆಂತರಿಕ ವಿಚಾರಣೆಗೂ ವರ್ಗಾವಣೆಗೂ ಸಂಬAಧವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸುತ್ತದೆ. ಆದರೆ, ಈ ಸ್ಪಷ್ಟನೆಯನ್ನು ನಂಬಲು ಯಾರೂ ತಯಾರಿಲ್ಲ.
ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಬಳಿಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ನೋಟುಗಳು ಪತ್ತೆಯಾದ ಹಿನ್ನೆಲೆಯಲ್ಲಿ ನ್ಯಾ. ವರ್ಮಾ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಆಂತರಿಕ ಸಮಿತಿಯೊಂದನ್ನು ರಚಿಸುತ್ತಾರೆ. ಅಲ್ಲದೇ, ವರ್ಮಾ ಅವರು ತಮ್ಮ ಮೊಬೈಲ್ ನಾಶಪಡಿಸದಂತೆ, ಅದರಲ್ಲಿನ ಸಂದೇಶಗಳು ಹಾಗೂ ಇತರ ವಿವರಗಳನ್ನು ತೆಗೆದುಹಾಕದಂತೆ ಸೂಚನೆ ನೀಡಲಾಗುತ್ತದೆ.
ಅಲ್ಲದೇ, ನ್ಯಾ. ಖನ್ನಾ ಅವರು ನ್ಯಾ. ವರ್ಮಾ ಅವರಿಂದ ಮೂರು ಪ್ರಶ್ನೆಗಳಿಗೆ ಲಿಖಿತ ಉತ್ತರ ಸಲ್ಲಿಸಲು ತಿಳಿಸುವಂತೆ ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಅವರಿಗೆ ಸೂಚನೆ ನೀಡುತ್ತಾರೆ. ನ್ಯಾ. ವರ್ಮಾ ಅವರು ತಮ್ಮ ಮನೆಯಲ್ಲಿ ಸಿಕ್ಕ ಹಣಕ್ಕೆ ಸಂಬAಧಿಸಿದAತೆ ಏನು ಹೇಳುತ್ತಾರೆ, ಆ ಹಣದ ಮೂಲ ಯಾವುದು, ಮಾರ್ಚ್ 15ರಂದು ಬೆಳಿಗ್ಗೆ ಬೆಂಕಿಯಲ್ಲಿ ಅರೆ ಸುಟ್ಟ ನೋಟುಗಳನ್ನು ತೆರವುಗೊಳಿಸಿದ ವ್ಯಕ್ತಿ ಯಾರು ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಲಾಗಿರುತ್ತದೆ.
ಜಸ್ಟೀಸ್ ಯಶವಂತ ವರ್ಮಾ ಅವರು ಅಲ್ಲಿ ಸಿಕ್ಕ ನೋಟುಗಳ ಬಗ್ಗೆ ತಮಗೆ ಯಾವುದೇ ಅರಿವಿಲ್ಲ ಎಂಬುದನ್ನು ಹೇಳಿದ್ದಾಗ್ಯೂ, ಘಟನೆ ನಡೆದ ಬಳಿಕ ದೆಹಲಿಯ ತಮ್ಮ ನಿವಾಸಕ್ಕೆ ಮರಳಲು ಯಾವುದೇ ಧಾವಂತ ತೋರಿಸಲಿಲ್ಲ ಎಂಬುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ, ತಮ್ಮ ವೇತನದಲ್ಲಿ ಜಸ್ಟೀಸ್ ವರ್ಮಾ ಅವರು ಅಷ್ಟೊಂದು ಪ್ರಮಾಣದ ಹಣವನ್ನು ಉಳಿಸಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ವರ್ಮಾ ಅವರು 1992ರಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡರು. 2014ರಲ್ಲಿ ನ್ಯಾಯಮೂರ್ತಿಯಾಗಿ ನೇಮಕವಾದರು. ಯಶಸ್ವಿ ವಕೀಲರು ಭಾರಿ ಪ್ರಮಾಣದ ಹಣವನ್ನು ಶುಲ್ಕ ರೂಪದಲ್ಲಿ ಪಡೆದಿರುತ್ತಾರೆ ಎನ್ನುವುದು ನಿಜ. ಹಾಗಿದ್ದರೆ, ಇಷ್ಟೊಂದು ಹಣ ಅವರು ವಕೀಲರಾಗಿದ್ದಾಗ ಗಳಿಸಿದ್ದ ಹಣವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದು ನ್ಯಾಯಯುತ ಮಾರ್ಗದಲ್ಲಿ ದುಡಿದದ್ದೇ ಸತ್ಯವೆಂದಾದರೆ ಆ ಹಣವನ್ನು ಬ್ಯಾಂಕು ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ ತೊಡಗಿಸಿದ್ದರೆ ವಾರ್ಷಿಕ ಶೇ 7ರಿಂದ 8ರಷ್ಟು ಬಡ್ಡಿಯ ಹಣವಾದರೂ ಬರುತ್ತಿತ್ತು. ಅದನ್ನು ಹೂಡಿಕೆ ಮಾಡುವುದು ಬಿಟ್ಟು ಹೀಗೆ ಸುಮ್ಮನೇ ಏಕೆ ಇರಿಸಿದರು ಎಂಬ ಬಲವಾದ ಸಂಶಯ ವ್ಯಕ್ತವಾಗುತ್ತದೆ.
ಈ ಹಣ ಆಸ್ತಿ ಮಾರಾಟದಿಂದ ಬಂದದ್ದು ಎಂದು ತಿಳಿದುಕೊಂಡರೂ ಅಷ್ಟೂ ಹಣವನ್ನು ಚೆಕ್ ಮೂಲಕ ಪಡೆಯುವ ಬದಲು ನಗದು ರೂಪದಲ್ಲಿ ಪಡೆದಿದ್ದರೇ? ಹಾಗೆ ಪಡೆದಿದ್ದರೆ ತೆರಿಗೆಯಿಂದ ತಪ್ಪಿಸಿಕೊಂಡಂತಾಗುವುದಿಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಅಷ್ಟು ಹಣ ಗಳಿಸಲು ಮತ್ತೊಂದು ಅಹಸ್ಯಕರ ದಾರಿ ಯಾವುದೆಂದರೆ ಆರೋಪಿಗಳಿಗೆ ಅನುಕೂಲಕರವಾಗುವ ತೀರ್ಪು ನೀಡುವುದು. ಹಣ ಪಡೆದು ಆರೋಪಿಗಳ ಪರವಾಗಿ ತೀರ್ಪು ನೀಡಲು ನ್ಯಾಯಾಧೀಶರಿಗೆ ಹಲವಾರು ದಾರಿಗಳಿವೆ. ಬಂಧಿತ ಆರೋಪಿಗೆ ಜಾಮೀನು ನೀಡಬೇಕಾದರೂ ನ್ಯಾಯಮೂರ್ತಿಗಳು ಅವರ ಪರವಾದ ತೀರ್ಪು ನೀಡಬೇಕಾಗುತ್ತದೆ. ಕೆಲ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾದ ತಕ್ಷಣವೇ ಕೆಲವರು ಬಂಧನದಿಂದ ರಕ್ಷಣೆ ನೀಡಲು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸುತ್ತಾರೆ. ಆಗಲೂ ನ್ಯಾಯಾಧೀಶರು ಹಣ ಪಡೆದು ಪೂರಕ ತೀರ್ಪು ನೀಡುವ ಸಾಧ್ಯತೆಗಳಿವೆ. ಮತ್ತೊಂದು ವಿಷಯವೆಂದರೆ, ಜಸ್ಟಿಸ್ ವರ್ಮಾ ಸೂಚಿಸಿರುವಂತೆ, ಅವರ ವಿರುದ್ಧ ಪಿತೂರಿ ಹೆಣೆಯಲಾಗಿದೆಯೇ? ಅವರ ಮನೆಯಲ್ಲಿ ಹಣವನ್ನು ಹುದುಗಿಟ್ಟು, ಜನರ ಗಮನ ಸೆಳೆಯಲು ಬೆಂಕಿ ಹಾಕಲಾಯಿತೇ? ಹೀಗೆ ಆಗಿದ್ದಲ್ಲಿ ದೇಶದ ನ್ಯಾಯಾಂಗದ ಮೇಲಿನ ಪರಿಣಾಮವು ಮತ್ತಷ್ಟು ಭೀಕರವಾಗಿದೆ. ಈ ಆರೋಪವು ಸತ್ಯವೇ ಆಗಿದ್ದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ಆಡಳಿತಾತ್ಮಕ ಯಂತ್ರದ ಕೈವಾಡವಿಲ್ಲದೆ ಇದು ಸಾಧ್ಯವಿಲ್ಲ ಎಂದು ಹೇಳಬೇಕಾಗುತ್ತದೆ.
ಎಲ್ಲೆಡೆಯೂ ಹೆಚ್ಚುತ್ತಿರುವ ವ್ಯಾಪಕ ಭ್ರಷ್ಟಾಚಾರ: ಶೋಷಕ ಬಂಡವಾಳಶಾಹಿ ವ್ಯವಸ್ಥೆಯ ಪ್ರತೀಕ
ಇಂದಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಹಜವಾದ ನೀತಿ, ನಿಯಮ, ರೂಢಿಗಳನ್ನು ಮುರಿದು ವೈಯಕ್ತಿಕ ಲಾಭಕ್ಕಾಗಿ ಹಣದ ಆಮಿಷ ಒಡ್ಡುವ ಬೆಳವಣಿಗೆಗಳು ನಡೆಯುತ್ತಿವೆ. ಒಮ್ಮೊಮ್ಮೆ ಹಣದ ಬದಲು ಅಧಿಕಾರ, ಪ್ರತಿಷ್ಠೆ, ಮೋಸ ಮಾಡುವ ಮೂಲಕ ಕೆಲ ಲಾಭಗಳನ್ನು ಪಡೆದುಕೊಳ್ಳುವ ಘಟನೆಗಳೂ ಇವೆ. ಭ್ರಷ್ಟಾಚಾರವು ಬರೀ ಭಾರತ ಅಷ್ಟೇ ಅಲ್ಲದೇ ಜಗತ್ತಿನ ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ದೇಶಗಳಲ್ಲಿ ಸಾಮಾನ್ಯ ಜನರ ಬದುಕನ್ನು ಅಸಹನೀಯವಾಗಿಸಿದ್ದು, ಭಾರಿ ದುಷ್ಪರಿಣಾಮವನ್ನು ಬೀರುತ್ತಿದೆ. ಹಣಕಾಸಿನ ಭ್ರಷ್ಟಾಚಾರ ಹಾಗೂ ಅಧಿಕಾರದ ದುರ್ಬಳಕೆಯ ಭ್ರಷ್ಟಾಚಾರದಿಂದಾಗಿ ಸಾಮಾನ್ಯ ಜನರ ಬದುಕು ಆರ್ಥಿಕವಾಗಿ ಅಷ್ಟೇ ಅಲ್ಲದೇ ಸಾಮಾಜಿಕವಾಗಿ, ನೈತಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ದುರ್ಭರಗೊಂಡಿದೆ.
‘ಪೊಲೀಸರು ಲಂಚ ಪಡೆಯುತ್ತಾರೆ’ ಎಂಬ ಗಾದೆ ಈಗಾಗಲೇ ಇದೆ. ಆದರೆ, ತೆಗೆದುಕೊಳ್ಳದೇ ಇರುವವರು ಯಾರು ಎಂಬ ಪ್ರಶ್ನೆಗಳು ಇವೆ. ಭ್ರಷ್ಟಾಚಾರದ ಆರೋಪದಿಂದ ಯಾವೊಂದು ಇಲಾಖೆಯೂ ಹೊರಗುಳಿದಿಲ್ಲ.
ರಾಜಕೀಯ ಸಂಸ್ಥೆಗಳಲ್ಲಿ ಉತ್ತರದಾಯಿತ್ವದ ಕೊರತೆ ಕಾಡುತ್ತಿದೆ. ಸಚಿವರು ಹಾಗೂ ಆಡಳಿತ ಪಕ್ಷದ ನಾಯಕರು ಬಿಲಿಯನ್ಗಟ್ಟಲೆ ಭ್ರಷ್ಟಾಚಾರದ ಹಗರಣಗಳಲ್ಲಿ ಪಾಲುದಾರರಾಗಿರುವುದರಿಂದ ಲಂಚ ಪಡೆದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಸಣ್ಣ ಪುಟ್ಟ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಕೆಲವರನ್ನು ಹಿಡಿದಂತೆ ಮಾಡಿ ಭಾರಿ ಪ್ರಮಾಣದ ಲಂಚದ ಪ್ರಕರಣಗಳನ್ನು ಇತಿಹಾಸದ ಕಾಲಗರ್ಭದಲ್ಲಿ ಹೂತು ಹಾಕುವ ಕೆಲಸ ನಡೆಯುತ್ತಲೇ ಇರುತ್ತದೆ. ಮತ್ತೊಂದು ಹೊಸ ಪ್ರಕರಣ ಬೆಳಕಿಗೆ ಬಂದ ಬಳಿಕ ಹಳೆಯ ಪ್ರಕರಣ ಸಮಾಧಿಯಾಗುತ್ತದೆ.
ಬೃಹತ್ ಭ್ರಷ್ಟಾಚಾರದ ಪ್ರಕರಣಗಳಿಗೆ ಕಾರಣರಾದವರು ಶಿಕ್ಷೆಯ ಬಲೆಯಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲದೇ ಅವರು ಯಾವುದೇ ತನಿಖೆ, ವಿಚಾರಣೆಗಳಿಂದಲೂ ಬಚಾವಾಗುತ್ತಾರೆ. ಬಂಧನದ ಭೀತಿಯಿಲ್ಲದೇ ಮುಕ್ತವಾಗಿ ಸಂಚರಿಸುತ್ತಾರೆ. ಸಚಿವರ ಹಿಂದೆ ಮುಂದೆ ಕಾಣಿಸಿಕೊಳ್ಳುತ್ತಾರೆ. ಸರ್ಕಾರದ ಕೃಪೆಯಿಂದ ನೀತಿ ನಿರೂಪಕ ಸಂಸ್ಥೆಗಳಲ್ಲಿ ಜಾಗ ಪಡೆದುಕೊಳ್ಳುತ್ತಾರೆ. ಆಯಕಟ್ಟಿನ ಹುದ್ದೆಗಳನ್ನೂ ಅಲಂಕರಿಸುತ್ತಾರೆ.
ಭ್ರಷ್ಟಾಚಾರವು ಕೆಲವೊಂದು ದುಷ್ಟ ರಾಜಕಾರಣಿಗಳ – ಆಡಳಿತಶಾಹಿಗಳ ಕೈಗಾರಿಕಾಪತಿಗಳ ಕೃತ್ಯ ಎಂಬ ನಂಬಿಕೆಯಿದೆ. ಆದರೆ ಭ್ರಷ್ಟಾಚಾರವು ಒಂದು ವ್ಯವಸ್ಥೆಯನ್ನು ಬಲಹೀನಗೋಳಿಸಲು ಸಾಧ್ಯವಾಗುವುದು ಒಂದು ವ್ಯವಸ್ಥೆಯೇ ಸಮಾಜದ ಮುನ್ನಡೆಗೆ ಮತ್ತು ನಾಗರಿಕತೆಯ ಬೆಳವಣಿಗೆಗೆ ಅಡ್ಡಗಲ್ಲಾಗಿ ನಿಂತಾಗ. ಆ ವ್ಯವಸ್ಥೆಯ ಫಲಾನುಭವಿಗಳು ಮತ್ತು ಅದರ ರಕ್ಷಕರು ಜನರ ಎಲ್ಲಾ ನ್ಯಾಯಯುತ ಆಕಾಂಕ್ಷೆಗಳನ್ನು ಮತ್ತು ಬೇಡಿಕೆಗಳನ್ನು ಹೊಸಕಿಹಾಕುತ್ತಾರೆ ಮತ್ತು ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಎಲ್ಲಾ ರೂಢಿ ಆಚರಣೆಗಳನ್ನು ಮತು ನಿಯಮಗಳನ್ನು ಕಾಲಡಿಯಲ್ಲಿ ತುಳಿದು ಹೊಸಕಿ ಹಾಕುತ್ತಾರೆ. ಇಂದು ಬಂಡವಾಳಶಾಹಿ ವ್ಯವಸ್ಥೆಯು ಪ್ರತಿಗಾಮಿಯಾಗಿರುವುದರಿಂದ ಅದರ ಎಲ್ಲಾ ಅಂಗಾAಗಳೂ ಸಹ ಭ್ರಷ್ಟಾಚಾರದಿಂದ ಆವೃತವಾಗಿವೆ. ಒಂದು ವ್ಯವಸ್ಥೆಯು ಹೊರನೋಟಕ್ಕೆ ಎಷ್ಟೇ ಬಲಿಷ್ಠವಾಗಿ ಕಂಡರೂ, ಒಳಗಿನಿಂದ ಗೆದ್ದಲು ಹತ್ತಿಕೊಂಡರೆ, ಅದರ ಪ್ರಮುಖ ಅಂಗಾಂಗಗಳನ್ನೇ ಅವು ತಿಂದುಬಿಡುತ್ತವೆ. ಅಂತೆಯೇ ಅಂತಹ ವ್ಯವಸ್ಥೆಯನ್ನು ಕಾಪಾಡುವವರೂ ಸಹ ಆ ಭ್ರಷ್ಟಾಚಾರದ ಎಂಜಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭ್ರಷ್ಟಾಚಾರವು ಇಂದಿನ ಬಂಡವಾಳಶಾಹಿ ವ್ಯವಸ್ಥೆಯ ಆಧಾರಸ್ತಂಭವಾಗಿದೆ.
ನ್ಯಾಯಾಂಗವೂ ಶುದ್ಧತೆ ಅಥವಾ ನ್ಯಾಯಪರತೆಯನ್ನು ಕಳೆದುಕೊಳ್ಳುತ್ತಿದೆಯೇ?
ಕಾರ್ಯಾಂಗ, ಶಾಸಕಾಂಗದ ಭ್ರಷ್ಟಾಚಾರದ ಬಗ್ಗೆ ಅರಿತಿರುವ ಸಾರ್ವಜನಿಕರು ಇಂದಿಗೂ ಕೆಲ ಮಟ್ಟಿಗೆ ನ್ಯಾಯಾಂಗದ ಮೇಲೆ ಭರವಸೆ ಇಟ್ಟಿದ್ದಾರೆ. ನ್ಯಾಯಾಂಗಕ್ಕೆ ಅಪರಿಮಿತ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ನೀಡಲಾಗಿದ್ದು, ಅದನ್ನು ಬಳಸಿಕೊಂಡು ನ್ಯಾಯಾಂಗ ವ್ಯವಸ್ಥೆಯು ಪ್ರಕರಣಗಳನ್ನು ಯಾವ ಪ್ರಲೋಭನೆಗೂ ಒಳಗಾಗದೇ ನಿಷ್ಪಕ್ಷಪಾತವಾಗಿ ನಿರ್ವಹಿಸಲಾಗುತ್ತಿದೆ ಎಂದು ಜನರನ್ನು ನಂಬಿಸಲಾಗಿದೆ. ನ್ಯಾಯಮೂರ್ತಿಗಳು ಯಾರ ಒತ್ತಡಕ್ಕೂ ಒಳಗಾಗದೇ ಸಾಕ್ಷಿಗಳನ್ನು ಆಧರಿಸಿ ಸೂಕ್ತ ಆದೇಶ ಹೊರಡಿಸುತ್ತಾರೆ ಎಂಬ ಭಾವನೆಯೇ ಇದೆ. ಹಾಗಾಗಿಯೇ ಅವರನ್ನು ‘ಮೈ ಲಾರ್ಡ್’ ಎಂದು ಸಂಬೋಧಿಸುವ ರೂಢಿ ಬೆಳೆದು ಬಂದಿದೆ.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಫ್ಯಾಸಿಸ್ಟ್ ಸರ್ವಾಧಿಕಾರಿ ಆಡಳಿತದಲ್ಲಿ ನ್ಯಾಯಾಂಗದ ಪ್ರಕ್ರಿಯೆಗಳನ್ನು ತಿರುಚಿ ಆಡಳಿತಾಂಗದ ಇಚ್ಛೆಗಳಿಗನುಗುಣವಾಗಿ ನ್ಯಾಯಾಂಗದ ಮುದ್ರೆ ಹಾಕಿಸಿಕೊಳ್ಳುವ ಯತ್ನಗಳ ಬಗ್ಗೆ ಕೆಲ ನ್ಯಾಯಮೂರ್ತಿಗಳು ಆಗಾಗ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ದುರದೃಷ್ಟವಶಾತ್ ಕಾರ್ಯಾಂಗದಿಂದ ಕೆಲ ಅನುಕೂಲಗಳನ್ನು ಪಡೆದುಕೊಳ್ಳಲು ಅಥವಾ ನಿವೃತ್ತಿ ಬಳಿಕ ಕೆಲ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಕೆಲ ನ್ಯಾಯಾಧೀಶರು ಕಾರ್ಯಾಂಗವನ್ನು ಬೇಸರ ಮೂಡಿಸುವಂತೆ ಹೊಗಳುತ್ತಿದ್ದಾರೆ. ಪತ್ರಿಕೆಗಳಲ್ಲಿ ವರದಿಯಾದಂತೆ ತನಗೆ ಅನುಕೂಲಕರ ತೀರ್ಪನ್ನು ನೀಡಿದ ನ್ಯಾಯಾಧೀಶರೊಬ್ಬರನ್ನು ಬಿಜೆಪಿಯು ರಾಜ್ಯಸಭಾ ಸದಸ್ಯರನ್ನಾಗಿಯೂ, ಇನ್ನಿಬ್ಬರನ್ನು ರಾಜ್ಯಪಾಲರನ್ನಾಗಿಯೂ ನೇಮಿಸಿತು.
ಮತ್ತೊಂದೆಡೆ ದಿಟ್ಟವಾಗಿ, ಯಾವ ಪ್ರಭಾವಕ್ಕೂ ಒಳಗಾಗದೇ ಸೂಕ್ತ ತೀರ್ಪುಗಳನ್ನು ನೀಡಿದ ಧೈರ್ಯವಂತ, ಪ್ರಾಮಾಣಿಕ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಶಿಕ್ಷೆ ನೀಡಿದ ಪ್ರಕರಣಗಳೂ ವರದಿಯಾಗಿವೆ. ಹೈಕೋರ್ಟ್ ನ್ಯಾಯಮೂರ್ತಿ ಒಬ್ಬರನ್ನು ಬೇರೆ ಹೈಕೋರ್ಟಿಗೆ ಮಧ್ಯರಾತ್ರಿ ದಿಢೀರ್ ವರ್ಗಾವಣೆ ಮಾಡಲಾಯಿತು. ಮತ್ತೊಂದು ಪ್ರಕರಣದಲ್ಲಿಯೂ ಹೀಗೆ ಹೈಕೋರ್ಟ್ ನ್ಯಾಯಮೂರ್ತಿ ಒಬ್ಬರನ್ನು ಬೇರೆಡೆಗೆ ಅವಧಿಗೆ ಮುನ್ನವೇ ವರ್ಗಾಯಿಸಲಾಯಿತು.
ಈ ರೀತಿಯ ಘಟನೆಗಳ ಒಟ್ಟಾರೆ ಅರ್ಥವೇನೆಂದರೆ ಕೆಲವರ ವೈಯಕ್ತಿಕ ಲಾಭಕ್ಕಾಗಿ ನ್ಯಾಯಾಂಗ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ರಾಜಿ ಮಾಡಿಕೊಳ್ಳಬೇಕು ಎಂಬ ಅರ್ಥ ಬರುತ್ತದೆ. ಇದರಿಂದಾಗಿ ನ್ಯಾಯಾಂಗವು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಎಲ್ಲ ಪ್ರಕರಣಗಳನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೇ ಸಮರ್ಥವಾಗಿ ನಿರ್ವಹಿಸಿ ತೀರ್ಪು ನೀಡಬೇಕು ಎಂಬ ಆಶಯಕ್ಕೆ ಧಕ್ಕೆ ಬಂದಂತಾಗುತ್ತದೆ. ಒಂದೇ ಬಗೆಯ ಅಪರಾಧ ಎಸಗಿದವರಿಗೆ ಎರಡು ವಿಭಿನ್ನ ತೀರ್ಪುಗಳನ್ನು ನೀಡುವುದನ್ನು ಹೇಗೆ ಒಪ್ಪಲು ಸಾಧ್ಯ? ಭಾರೀ ಶುಲ್ಕ ಪಡೆಯುವ ವಕೀಲರು ಪ್ರಕರಣದ ದಿಕ್ಕನ್ನೇ ಬದಲಿಸಬಹುದು ಎಂದಾದರೆ ನ್ಯಾಯದ ಅರ್ಥವಾದರೂ ಎಲ್ಲಿ ಉಳಿಯುತ್ತದೆ?
ನ್ಯಾಯಮೂರ್ತಿಗಳೂ ಅಗತ್ಯಕ್ಕೆ ತಕ್ಕಂತೆ, ಒತ್ತಡ, ಆಮಿಷಗಳಿಗೆ ಒಳಗಾಗಿ ತಮ್ಮ ತೀರ್ಪುಗಳನ್ನು ಬದಲಿಸಿಕೊಳ್ಳುವಂತೆ ಒತ್ತಡ ಹೇರುವ ಜಾಲಕ್ಕೆ ಬಿದ್ದರೆ ಹೇಗೆ ಎಂಬ ಚಿಂತೆ ಪ್ರಜ್ಞಾವಂತರನ್ನು ಕಾಡುತ್ತಿದೆ. ಇಂತಹ ಘಟನೆಗಳು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಯಾವೊಂದು ಅಂಗವೂ ಭ್ರಷ್ಟಾಚಾರದ ರಾಡಿಯನ್ನು ಮೆತ್ತಿಸಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲ ಎಂಬ ಆರೋಪಗಳಿಗೆ ಇಂಬು ಕೊಟ್ಟಂತಾಗುತ್ತದೆ. ನ್ಯಾ.ಯಶವಂತ ವರ್ಮಾ ಪ್ರಕರಣದಲ್ಲಿ ಅಂತಿಮ ತೀರ್ಪು ಏನು ಬರುತ್ತದೋ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಸಾಮಾನ್ಯ ಜನರಲ್ಲಿ ಹಲವು ಸಂಶಯಗಳು ಮೂಡಿದ್ದಂತೂ ಸುಳ್ಳಲ್ಲ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಇತ್ತೀಚೆಗೆ ಅವರಿಗೆ ಎರಡು ಅವಕಾಶಗಳನ್ನು ನೀಡಿದ್ದರು. ಒಂದು, ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಎರಡು, ಸಂಸತ್ತಿನಲ್ಲಿ ಮಹಾಭಿಯೋಗವನ್ನು ಎದುರಿಸಬೇಕು. ನ್ಯಾ. ವರ್ಮಾ ಅವರು ರಾಜೀನಾಮೆಯ ಪ್ರಸ್ತಾವವನ್ನು ತಿರಸ್ಕರಿಸಿದ್ದು, ಮಹಾಭಿಯೋಗವನ್ನು ಎದುರಿಸುವುದಾಗಿ ಹೇಳಿದ್ದಾರೆ. ಆ ಮೂಲಕ ಇದರ ಹಿಂದೆ ಯಾರು ಯಾರು ಇದ್ದಾರೆ ಎಂಬುದು ಬಯಲಾಗುವುದು ನಿಶ್ಚಿತವಾಗುತ್ತಿದೆ.