ಮೊಬೈಲ್ನ ಕರಾಳ ಛಾಯೆಯಡಿ ನಲುಗುತ್ತಿರುವ ಬಾಲ್ಯ
(ಕೊಲ್ಕತ್ತಾದ ನಾಗರಿಕರೊಬ್ಬರು ನಮ್ಮ ಪಕ್ಷದ ಇಂಗ್ಲಿಷ್ ಮುಖಪತ್ರಿಕೆ `ಪ್ರಾಲಿಟೇರಿಯನ್ ಎರಾ’ ಸಂಪಾದಕರಿಗೆ ಬರೆದ ಪತ್ರದ ಅನುವಾದವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.)
ಮಾನ್ಯರೇ,
ಇತ್ತೀಚೆಗೆ ಭೇಟಿಯಾದ ಯುವ ತಂದೆಯೊಬ್ಬರು ಎದುರಿಸುತ್ತಿರುವ ಸಮಸ್ಯೆ ತಿಳಿದು ಮನಸ್ಸು ವಿಚಲಿತವಾಯಿತು. ಬಹಳ ಪರಿಚಯಸ್ಥರು, ಇತ್ತೀಚೆಗೆ ಅವರ ಭೇಟಿಯಾಯಿತು. ನೋಡಿದ್ದೇ ತಡ ನನ್ನ ಕೈಹಿಡಿದು ಗಳಗಳನೆ ಅಳತೊಡಗಿದರು. “ಏನಾಯಿತು?” ಎಂದು ಕೇಳಿದೆ. ಅವರು ಹೇಳಿದ್ದು ಕೇಳಿ ಮುಂದೇನು ಹೇಳಬೇಕೆಂದು ತಿಳಿಯದೆ ತಡಕಾಡುವಂತಾಯಿತು. ಅವರ ಸಮಸ್ಯೆಗೆ ಕಾರಣ ‘ಮೊಬೈಲ್’ ಫೋನು.
ಇತ್ತೀಚಿನ ದಿನಗಳಲ್ಲಿ ಈ ಸಾಧನ ನಮ್ಮ ಜೀವನದ, ಅದರಲ್ಲೂ ಮಧ್ಯಮ ವರ್ಗದವರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಮಕ್ಕಳಿಗೆ ಊಟ ಮಾಡಿಸುವುದಕ್ಕೂ ತಾಯಂದಿರು ಇದನ್ನು ಸುಲಭ ಸಾಧನವಾಗಿ ಬಳಸುತ್ತಿದ್ದಾರೆ. ಹಾಗಾಗಿ, ಅತೀ ಚಿಕ್ಕ ವಯಸ್ಸಿನಲ್ಲೇ ಕ್ರಮೇಣವಾಗಿ ಮಕ್ಕಳಿಗೆ ಮೊಬೈಲ್ನ ಚಟ ಹತ್ತುತ್ತಿದೆ. ಮಕ್ಕಳ ಮನಸ್ಸು ಸಹಜವಾಗಿಯೇ ಎಲ್ಲವನ್ನೂ ತಿಳಿದುಕೊಳ್ಳುವ ಹುಡುಕಾಟದಲ್ಲಿರುತ್ತದೆ. ಕಾಣದ್ದನ್ನು ಕಾಣುವ, ಅರಿಯದ್ದನ್ನು ಅರಿಯುವ ತವಕ. ತಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳುವ ಬಯಕೆ. ಇಂತಹ ವಯಸ್ಸಿನಲ್ಲಿ ಮೊಬೈಲ್ ಚಟ ಹತ್ತಿದರೆ, ಅದರ ಆಕರ್ಷಕ ಕೀಲಿಗಳು, ಐಕಾನ್ಗಳು, ವೆಬ್ ಸೈಟ್ಗಳು ಮಗುವನ್ನು ಸೆಳೆಯಲಾರಂಭಿಸುತ್ತವೆ. ವಿಡಿಯೋ ಗೇಮ್ಗಳು, ಕಾರ್ಟೂನುಗಳ ಮೂಲಕ ಮಕ್ಕಳು ತಮಗೆ ಅರಿವಿಲ್ಲದಂತೆಯೇ ಪೋರ್ನೋಗ್ರಫಿಯ ಸೈಟ್ಗಳ ಕರಾಳಲೋಕವನ್ನು ಪ್ರವೇಶಿಸುತ್ತಾರೆ. ಆರಂಭದಲ್ಲಿ ಕಿಶೋರರು ಇದರಿಂದ ಬೆರಗಾದರೂ, ನಂತರ ಕ್ರಮೇಣವಾಗಿ ಅವರದರ ವ್ಯಸನಿಗಳಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಏಳು-ಎಂಟರ ಎಳೆಯ ವಯಸ್ಸಿನ ಮಕ್ಕಳು ಪೋರ್ನೋಗ್ರಫಿಯನ್ನು ನೋಡುವ ಚಟ ಹತ್ತಿಸಿಕೊಳ್ಳುವ ಆತಂಕಕಾರಿ ಬೆಳವಣಿಗೆಯನ್ನು ಮನೋವೈದ್ಯರು ಗಮನಿಸಿದ್ದಾರೆ. ಅದರಲ್ಲೂ, ಸದಾ ಕಾರ್ಯನಿರತರಾಗಿದ್ದು, ತಮ್ಮ ಮಕ್ಕಳ ಮೇಲೆ ನಿಗಾ ಇಡಲಾಗದ ಪೋಷಕರ ಮಕ್ಕಳು ಇದಕ್ಕೆ ಅತಿ ಹೆಚ್ಚು ಬಲಿಯಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳೊಡನೆ ಅವಶ್ಯಕ ಸಮಯವನ್ನು ಕಳೆಯುತ್ತಿಲ್ಲವಾದುದರಿಂದಲೇ, ಮಕ್ಕಳು ಮೊಬೈಲ್ ಅಥವಾ ಇತರೆ ಶ್ರವಣ-ದೃಶ್ಯ ಗ್ಯಾಜೆಟ್ಗಳ ವ್ಯಸನಿಗಳಾಗುತ್ತಿದ್ದಾರೆ.
ಈಗ ನಾನು ನನ್ನ ಮುಂದೆ ಕಣ್ಣೀರಿಟ್ಟ ತಂದೆಯ ಕಥೆ ಹೇಳುತ್ತೇನೆ. ಆತನ ಒಂಬತ್ತು ವರ್ಷದ ಪುಟ್ಟ ಮಗಳು ಮೊಬೈಲ್ ಫೋನ್ನಲ್ಲಿಯ ಪೋರ್ನೋಗ್ರಫಿಯ ವ್ಯಸನಿಯಾಗಿದ್ದಾಳೆ. ತಮ್ಮ ಮಗಳು ಈ ವಿಕೃತ ಮನಸ್ಥಿತಿಯ ಚಕ್ರವ್ಯೂಹಕ್ಕೆ ಹೇಗೆ ಸಿಲುಕಿದಳು ಎಂಬುದು ಆಕೆಯ ಹೆತ್ತವರಿಗೆ ಗೊತ್ತೇ ಇಲ್ಲ. ಪಕ್ಕದ ಮನೆಯ ಹತ್ತು ವರ್ಷದ ಹುಡುಗನೊಂದಿಗೆ ಇದನ್ನು ನೋಡುತ್ತಿರುವುದನ್ನು ಕಂಡು ಆ ಹುಡುಗನ ತಾಯಿ ಇವರ ಗಮನಕ್ಕೆ ತಂದ ಮೇಲೆಯೇ ಇವರಿಗೆ ಈ ಬಗ್ಗೆ ಗೊತ್ತಾದದ್ದು. ಅಲ್ಲದೇ ಅದನ್ನು ನೋಡುತ್ತಿರುವಾಗ, ಈ ಹುಡುಗಿ ಆ ಹುಡುಗನಲ್ಲಿ ಲೈಂಗಿಕ ಬಯಕೆ ಹುಟ್ಟಿಸಲು ಅವನ ಮರ್ಮಾಂಗವನ್ನು ಮುಟ್ಟುತ್ತಿದ್ದಳಂತೆ. ಆ ತಾಯಿ ಮೊಬೈಲ್ಅನ್ನು ಕಸಿದು ಬೈದಿದ್ದಾರೆ. ಇವೆಲ್ಲಾ ಹೇಗೆ ಸಿಕ್ಕಿತೆಂದು ಪ್ರಶ್ನಿಸಿದಾಗ, ಮೊಬೈಲ್ ನೋಡುತ್ತಿರುವಾಗ ಈ ಪೋರ್ನೋಗ್ರಫಿ ವೆಬ್ಸೈಟ್ಗಳು ಸಿಕ್ಕು ಕ್ರಮೇಣವಾಗಿ ಚಟ ಹತ್ತಿದೆ ಎಂಬುದನ್ನು ಬಾಯಿಬಿಟ್ಟಿದ್ದಾರೆ. ಹಿಂದೆ ಈ ಪುಟ್ಟ ಹುಡುಗಿ ಹಾಡುವುದರಲ್ಲಿ ಮತ್ತು ಚಿತ್ರಕಲೆಯಲ್ಲಿ ತುಂಬಾ ಪ್ರವೀಣಳಾಗಿದ್ದಳು. ಪಶ್ಚಿಮ ಬಂಗಾಳದ ವೈದ್ಯೆ ‘ಅಭಯ’ಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ, ಅವಳು ಅರಿಜಿತ್ ಸಿಂಗ್ ಅವರ ‘ಆರ್ ಕೋಬೆ, ಆರ್ ಕೋಬೆ’ ಹಾಡನ್ನು (‘ಈಗಲ್ಲದಿದ್ದರೆ ಇನ್ಯಾವಾಗ’ ಎಂಬ ಹಾಡು ಆಗ ‘ಅಭಯಳಿಗೆ ನ್ಯಾಯ ಒದಗಿಸಿ ಎಂದು ಪ್ರತಿಭಟಿಸುತ್ತಿರುವವರಲ್ಲಿ ಬಹಳ ಸ್ಫೂರ್ತಿ ತುಂಬಿತ್ತು) ಸ್ವಯಂಪ್ರೇರಿತವಾಗಿ ಕಲಿತು ಹಾಡುತ್ತಿದ್ದಳಂತೆ. ಕ್ರಮೇಣವಾಗಿ ಅವಳು ತನ್ನೆಲ್ಲಾ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿರುವುದನ್ನು ಕಂಡು ಅವಳ ತಂದೆ ದುಃಖಿಸುತ್ತಾ ಕೇಳಿದರು: “ನನ್ನ ಒಬ್ಬಳೇ ಮಗಳನ್ನು ನಾನು ಹೇಗೆ ಉಳಿಸಿಕೊಳ್ಳಲಿ ಎಂದು ದಯವಿಟ್ಟು ಹೇಳಿ”. ನಾನು ಅವರನ್ನು ಸಮಾಧಾನಿಸಲು ಪ್ರಯತ್ನಿಸಿದೆ: “ಇದು ನಿಮ್ಮೊಬ್ಬರ ಸಮಸ್ಯೆಯಲ್ಲ, ಇದು ಸಾಮಾಜಿಕ ಅಧಃಪತನದ ಪರಿಣಾಮ. ಇದು ಯುವಕರು ಮತ್ತು ವೃದ್ಧರನ್ನಷ್ಟೇ ಅಲ್ಲದೆ ಚಿಕ್ಕ ಮಕ್ಕಳನ್ನೂ ತನ್ನ ಕೂಪಕ್ಕೆ ಎಳೆದುಕೊಳ್ಳುತ್ತಿದೆ. ನಮ್ಮ ಕುಟುಂಬದ ಸದಸ್ಯರೊಬ್ಬರು ಇದಕ್ಕೆ ಬಲಿಯಾಗಿರುವುದನ್ನು ಕಂಡಾಗ ನಾವು ಅದನ್ನು ವೈಯಕ್ತಿಕ ಸಮಸ್ಯೆ ಎಂದು ಭಾವಿಸುತ್ತೇವೆ. ಇದು ಬಹಳವೇ ತಪ್ಪು ಗ್ರಹಿಕೆ. ಬಾಲ್ಯದ ಪರಿಶುದ್ಧತೆಯನ್ನು ಕಾಪಾಡಲು ಸೃಜನಶೀಲತೆ ಹಾಗೂ ಇಂತಹ ಇತರ ವಿಷಯಗಳತ್ತ ಮಗುವಿನ ಆಸಕ್ತಿ ಬೆಳೆಸಬೇಕು, ಅವನ್ನು ಪ್ರೋತ್ಸಾಹಿಸಬೇಕು. ಮಕ್ಕಳನ್ನು ದೈಹಿಕ ವ್ಯಾಯಾಮ ಮಾಡಲು, ಹೊರಾಂಗಣ ಆಟಗಳನ್ನು ಆಡಲು, ಕಥೆಗಳನ್ನು ಕೇಳಲು ಮತ್ತು ಅವರಿಗೆ ಸರಿಹೊಂದುವ ಲೇಖನಗಳನ್ನು ಓದಲು ಪ್ರೋತ್ಸಾಹಿಸಬೇಕು. ಜೊತೆಗೆ, ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಹೋರಾಟಗಾರರು ಮತ್ತು ನವೋದಯ ಚಿಂತಕರ ಅಮೂಲ್ಯ ಜೀವನ ಮತ್ತು ಹೋರಾಟದ ಬಗ್ಗೆ ತಿಳಿದುಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಎಸ್ಯುಸಿಐ(ಸಿ) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್ರವರು ಭವಿಷ್ಯದ ಪೀಳಿಗೆಯನ್ನು ಈ ಅವನತಿಯಿಂದ ರಕ್ಷಿಸುವಂತೆ ಪದೇ ಪದೇ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಬರೀ ನೀವು ಮಾತ್ರವಲ್ಲ, ಸಾವಿರಾರು ಪೋಷಕರು ಇಂತಹ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ನಿಮ್ಮ ಮಗಳು, ಈ ಕೂಡಲೇ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸಿ. ಜೊತೆಗೆ, ವಾರಕ್ಕೊಮ್ಮೆ ಅಥವಾ ಸಾಧ್ಯವಾದರೆ ಪ್ರತಿದಿನ, ಅವಳು ಹೊರಾಂಗಣ ಆಟಗಳು ಮತ್ತು ಇತರೆ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ.” ಎಂದು ಅವರಿಗೆ ಕೆಲವು ಸಲಹೆಗಳನ್ನು ನೀಡಿದೆ.
ಕೆಲವು ವಾರಗಳ ತರುವಾಯ ಆ ಪುಟ್ಟ ಹುಡುಗಿ ಇತ್ತೀಚೆಗೆ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದಾಳೆ ಎಂಬುದು ನನ್ನ ಗಮನಕ್ಕೆ ಬಂದು ಮನಸ್ಸು ಹಗುರಾಯಿತು.
ಹೃತ್ಪೂರ್ವಕ ನಮನಗಳೊಂದಿಗೆ,
ದೇಬಾಶಿಸ್ ರಾಯ್
ಹೌರಾ, ಕೊಲ್ಕತ್ತಾ