
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ!
ಜನಾಂದೋಲನಕ್ಕೆ ಮುಂಬನ್ನಿ-ಎಸ್ಯುಸಿಐ(ಕಮ್ಯುನಿಸ್ಟ್) ಕರೆ
ಇಂದಿನ ಸಮಾಜದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳಿಂದ ಜನಜೀವನ ದುರ್ಭರವಾಗಿದೆ. ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಬೆಳೆಯುತ್ತಿರುವ ಸಾಂಸ್ಕೃತಿಕ ಅಧ:ಪತನ, ಶ್ರೀಮಂತರ-ಬಡವರ ನಡುವೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಕಾಡುತ್ತಿರುವ ಆರ್ಥಿಕ ಅಭದ್ರತೆ, ಅಸತ್ಯ, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕಾದ ಯುವಪೀಳಿಗೆ ದಾರಿ ತಪ್ಪುತ್ತಿರುವ ಕೆಟ್ಟ ಬೆಳವಣಿಗೆ, ಮೊಬೈಲ್ ಮಾಯಾಜಾಲಕ್ಕೆ ಆಕರ್ಷಿತರಾಗಿ ಮಾಡಬಾರದ ಕೆಲಸ ಮಾಡಿ ಅಪರಾಧಿ ಮನೋಭಾವಕ್ಕೆ ಬಲಿಯಾಗುತ್ತಿರುವ ಹದಿಹರೆಯದ ಮಕ್ಕಳು....ಇವೆಲ್ಲವೂ ನಮ್ಮ ಮನ:ಸಾಕ್ಷಿಯನ್ನು ಕಲಕುವಂತಿವೆ. ಎನ್ಸಿಆರ್ಬಿ (National Crimes Record Bureau)-2022ರ ಪ್ರಕಾರ ದೇಶದಲ್ಲಿ ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ, ದಿನಕ್ಕೆ 90 ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಗಂಡನೇ ತನ್ನ ಜೀವನ ಸಂಗಾತಿಯನ್ನು ಕೊಂದು ತುಂಡು ತುಂಡು ಮಾಡಿ ಫ್ರಿಡ್ಜ್ ಅಥವಾ ಸೂಟ್ಕೇಸ್ನಲ್ಲಿ ತುರುಕಿದಂತಹ ಕ್ರೂರ ಘಟನೆಗಳಿಗೆ ಈ ದೇಶ ಸಾಕ್ಷಿಯಾಗಿದೆ. ನೆರೆ ರಾಜ್ಯವಾದ ಆಂಧ್ರದಲ್ಲಿ ನಾಲ್ಕು ಹಾಗೂ ಆರು ವರ್ಷದ ಇಬ್ಬರು ಮಕ್ಕಳು ಒಳ್ಳೆಯ ಅಂಕಗಳನ್ನು ಗಳಿಸಲಿಲ್ಲವೆಂದು, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಬದುಕಲು ಅಸಾಧ್ಯವೆಂದು ಭಾವಿಸಿ ಸ್ವತ: ಅವರ ತಂದೆಯೇ ಆ ಇಬ್ಬರು ಕಂದಮ್ಮಗಳನ್ನು ನೀರಲ್ಲಿ ಮುಳುಗಿಸಿ ಸಾಯಿಸಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಎಲ್ಲರನ್ನೂ ಆಘಾತಗೊಳಿಸಿದೆ! ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ವಿದ್ಯುತ್ ಮುಂತಾದ ಎಲ್ಲಾ ಸೇವಾ ವಲಯಗಳು ವ್ಯಾಪಾರದ ಕೂಪಗಳಾಗಿವೆ. ಎಲ್ಲಾ ಅಗತ್ಯ ವಸ್ತುಗಳ-ಔಷಧಿಗಳ ಬೆಲೆಗಳು ದಿನೇ ದಿನೇ ಹೆಚ್ಚುತ್ತಿವೆ. ರಿಯಲ್ ಎಸ್ಟೇಟ್ ದಂಧೆಕೋರರು ಹಾಗೂ ಕಾರ್ಪೊರೇಟ್ ಮನೆತನಗಳು ಬಡವರ ಜೀವನದ ಮೇಲೆ ಪ್ರಹಾರ ಮಾಡುತ್ತಿವೆ. ಇವರಿಗೆ ಬೆನ್ನೆಲುಬಾಗಿ ನಿಂತಿವೆ ನಮ್ಮ ಸರ್ಕಾರಗಳು! ಎಲ್ಲಾ ಸರ್ಕಾರಗಳು ಜನಪರ ನೀತಿಗಳನ್ನು ಮಂಡಿಸುವ ಬದಲು, ಬಂಡವಾಳಗಾರರ ಪರ ನೀತಿಗಳನ್ನು ಜಾರಿಗೊಳಿಸುತ್ತಿವೆ. ಜನಪ್ರತಿನಿಧಿಗಳು ಮಾಲೀಕರ ಪ್ರತಿನಿಧಿಗಳಾಗಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯಿಂದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮುಂತಾದ ಎಲ್ಲಾ ಕ್ಷೇತ್ರಗಳು ಲಾಭದ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿವೆ. ಎಲ್ಲಿಯವರೆಗೆ ಸರ್ಕಾರಗಳು ಬಂಡವಾಳಗಾರರಿಗಾಗಿ ಸೇವೆ ಮಾಡುತ್ತವೆಯೋ ಅಲ್ಲಿಯವರೆಗೂ ಶ್ರೀಸಾಮಾನ್ಯನ ಬದುಕು ಉತ್ತಮವಾಗುವುದಿಲ್ಲ. ಯಾವ ರಾಯ ಬಂದರೂ ರಾಗಿ ಬೀಸುವುದು ತಪ್ಪುವುದಿಲ್ಲ!
ರಾಜ್ಯದ ಪ್ರಸಕ್ತ ರಾಜಕೀಯ ಪರಿಸ್ಥಿತಿ
ಕರ್ನಾಟಕ ರಾಜ್ಯದ ರಾಜಕೀಯ ಪರಿಸ್ಥಿತಿ ಹಿಂದೆಂದೂ ಕೇಳರಿಯದಂತಹ ರೀತಿಯಲ್ಲಿ ಅಧೋಗತಿ ತಲುಪಿದೆ. ಸರ್ಕಾರ ರಚಿಸಿ ಎರಡು ವರ್ಷಗಳು ಸಮೀಪಿಸುತ್ತಾ ಬಂದರೂ, ಕಾಂಗ್ರೆಸ್ ನಾಯಕರ ಮಧ್ಯೆ ಅಧಿಕಾರದ ಪೈಪೋಟಿ ನಿಂತಿಲ್ಲ. ಬಿಜೆಪಿ, ಜೆಡಿ(ಎಸ್) ಎರಡೂ ಪಕ್ಷಗಳು ಸಹ ಆಂತರಿಕ ಕಚ್ಚಾಟಗಳಲ್ಲಿ ಮುಳುಗಿಹೋಗಿವೆ. ಕಳೆದ ಅವಧಿಯಲ್ಲಿ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಬೆನ್ನುಹತ್ತಿ ಅದನ್ನೇ ಚುನಾವಣೆಯ ವಿಷಯವನ್ನಾಗಿಸಿಕೊಂಡು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು. ಭ್ರಷ್ಟಾಚಾರವನ್ನು ಮಟ್ಟ ಹಾಕುವ ಮಾತಿರಲಿ, ಬಿಜೆಪಿ ಅವಧಿಯ ಆಡಳಿತದಲ್ಲಿ 40 ಪರ್ಸೆಂಟ್ ಇದ್ದ ಕಮಿಷನ್ ಈಗ 60 ಪರ್ಸೆಂಟ್ಗೆ ಏರಿಕೆಯಾಗಿರುವ ವರದಿಗಳು ಬಂದಿವೆ! ಜನರ ಸಮಸ್ಯೆಗಳನ್ನು ಎತ್ತಿಹಿಡಿದು ಬೀದಿಯಲ್ಲಿ ಪ್ರತಿಭಟಿಸುವ ಮಟ್ಟದಲ್ಲಿ ವಿರೋಧ ಪಕ್ಷಗಳಿಲ್ಲ. ಕೆಲವು ಬಾರಿ ಪ್ರತಿಭಟನೆಗಳನ್ನು ನಡೆಸಿದರೂ, ಅದು ರಾಜಕೀಯ ದುರ್ಲಾಭಕ್ಕಾಗಿ ಮಾತ್ರ ಸೀಮಿತವಾಗಿದೆ. ಜನರ ಸಮಸ್ಯೆಗಳನ್ನು ಚರ್ಚಿಸಲು ವೇದಿಕೆಯಾಗಬೇಕಿದ್ದ ವಿಧಾನಸೌಧದ ಕಲಾಪಗಳು 'ಮಧುಬಲೆ’ ಯಂತಹ ಹೀನ ಕೃತ್ಯಗಳ ಚರ್ಚೆಗಳ ಕೆಸರೆರಚಾಟದಲ್ಲಿ ಮುಳುಗಿರುವುದನ್ನು ನೋಡಿ ಅಸಹ್ಯಪಡುವಂತಾಗಿದೆ.
ರಾಜ್ಯದ ಜನಗಳ ಬವಣೆ ಕೇಳುವವರು ಯಾರು?
ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ತುತ್ತಾದ ಬಡಜನರು ಸಾಲ ತೀರಿಸಲಾಗದೆ ಅವಮಾನ, ಹಿಂಸೆಗೆ ಬಲಿಯಾಗಿದ್ದಾರೆ. ಬಡ ಕುಟುಂಬಗಳ ಆಧಾರಸ್ತಂಭವಾಗಿ ಇದ್ದವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳೆದ ಬೆಳೆಗೆ ಬೆಲೆ ಸಿಗದೆ ಅಪಾರ ಖರ್ಚು ವೆಚ್ಚಗಳನ್ನು ಮಾಡಿರುವ ರೈತರು ಕಂಗಾಲಾಗಿ ಹೋಗಿದ್ದಾರೆ. ವರ್ಷಗಟ್ಟಲೆ ನೆನೆಗುದಿಗೆ ಬಿದ್ದಿರುವ ಲಕ್ಷಾಂತರ ಬಗರ್ ಹುಕುಂ ಬಡ ಸಾಗುವಳಿದಾರರ ಸಮಸ್ಯೆ ಪರಿಹಾರ ಕಾಣದೆ ಮುಂದೂಡಲ್ಪಡುತ್ತಿದೆ. ಆಶಾ-ಅಂಗನವಾಡಿ ಮುಂತಾದ ಸ್ಕೀಮ್ ನೌಕರರು ಬಿಡಿಗಾಸಿಗೆ ಕೆಲಸ ಮಾಡುತ್ತಿದ್ದಾರೆ. ಜೀವನ ನಡೆಸುವುದು ಕಷ್ಟವೆಂದು, ಗೌರವದ ಜೀವನ ನಡೆಸಲು ಬೇಕಾದ ಕನಿಷ್ಠ ವೇತನ ಕೊಡಬೇಕೆಂದು ‘ಆಶಾ’ಗಳು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದು ಹಗಲು-ರಾತ್ರಿ ಹೋರಾಟ ಮಾಡಿದರೂ ಸರ್ಕಾರದಿಂದ ಸಿಕ್ಕಿದ ಆಶ್ವಾಸನೆ ಇನ್ನೂ ಈಡೇರಿಲ್ಲ! ರಾಜ್ಯದ ಅತ್ಯಂತ ಕೆಳಸ್ತರದ ಬಡ ಜನರು ತಮ್ಮ ಮಕ್ಕಳ ಶಿಕ್ಷಣಕ್ಕೆ ಅವಲಂಬಿಸಿರುವ 6,000ಕ್ಕೂ ಹೆಚ್ಚು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ವಿರೋಧ ಪಕ್ಷಗಳ ಸಹಕಾರದೊಂದಿಗೆ ಸರ್ಕಾರ ನಿರ್ಧಾರ ಮಾಡಿದೆ!
ಉದ್ಯೋಗ ಸೃಷ್ಟಿಸುವ ಮತ್ತು ನಿರುದ್ಯೋಗ ಭತ್ಯೆ ನೀಡುವ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದರೂ, ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಒಂದು ಹೆಜ್ಜೆಯೂ ಮುನ್ನಡೆ ಇಟ್ಟಿಲ್ಲ. ಬದಲಾಗಿ ನೇಮಕಾತಿ ಮಾಡಿಕೊಳ್ಳಬೇಕಾಗಿದ್ದ ಕೆಪಿಎಸ್ಸಿ ಭ್ರಷ್ಟಾಚಾರದ ಕರ್ಮಕಾಂಡದಲ್ಲಿ ಮುಳುಗಿಹೋಗಿದೆ. ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳು ಹಾಗೆಯೇ ಕೊಳೆಯುತ್ತಿವೆ. ಸಾವಿರಾರು ಐಟಿ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗಿದೆ. ಕೃತಕ ಬುದ್ಧಿಮತ್ತೆಯ ಪರಿಣಾಮವಾಗಿ ಲಕ್ಷಾಂತರ ಜನ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಬಡಜನರಿಗೆ ಆಶ್ರಯವಾಗಿರಬೇಕಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ಸೌಲಭ್ಯಗಳು, ಅವಶ್ಯಕ ವೈದ್ಯರು, ದಾದಿಯರ ಕೊರತೆಯಿಂದ, ಅದರಲ್ಲೂ ಮುಖ್ಯವಾಗಿ ಕಳಪೆ ಔಷಧಿಗಳಿಂದ ಹಲವಾರು ಹಸುಗೂಸುಗಳು ಹಾಗೂ ಬಾಣಂತಿಯರು ಇತ್ತೀಚೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 3,350 ಬಾಣಂತಿಯರು ಪ್ರಾಣ ಕಳೆದುಕೊಂಡಿದ್ದನ್ನು ಗಮನಿಸಿದ ರಾಜ್ಯದ ಜನತೆ ಕಂಗಾಲಾಗಿದ್ದಾರೆ.
ಇವುಗಳ ಮಧ್ಯೆ ರಾಜ್ಯ ಸರ್ಕಾರ ನೀರು, ಹಾಲು, ಸಾರಿಗೆ, ವಿದ್ಯುತ್, ಟೋಲ್ ದರಗಳನ್ನು ಹಾಗೂ ಕಸದ ಸುಂಕವನ್ನು ವಿಪರೀತ ಹೆಚ್ಚಿಸಿದೆ. ದಿನನಿತ್ಯ ಬಳಸುವ ಆಹಾರ ಧಾನ್ಯಗಳ ಬೆಲೆಗಳು ಆಕಾಶಕ್ಕೆ ಜಿಗಿಯುತ್ತಿವೆ. ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಸರ್ಕಾರ ಅಬ್ಬರದ ಪ್ರಚಾರ ಮಾಡುತ್ತಿದೆ. ಆದರೆ, ಸಣ್ಣ ವ್ಯಾಪಾರಿಗಳು, ಮಧ್ಯಮವರ್ಗದವರು ಅನುಭವಿಸುತ್ತಿರುವ ವಿದ್ಯುತ್ ದರ ಏರಿಕೆ ಮತ್ತು ಸ್ಮಾರ್ಟ್ ಮೀಟರ್ ಸಮಸ್ಯೆ ಸುದ್ದಿಯಾಗುತ್ತಿಲ್ಲ! ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲಿ ಈ ದುಬಾರಿ ‘ಕೊಡುಗೆ’ಳನ್ನು ನೀಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಅತ್ಯಂತ ಕಡು ಜನ ವಿರೋಧಿ ಎಂದು ಸಾಬೀತುಪಡಿಸಿದೆ. ಕೇಂದ್ರ ಸರ್ಕಾರವು ಕೂಡ ಡಿಸೇಲ್, ಪೆಟ್ರೋಲ್ ದರಗಳನ್ನು ಹಾಗೂ ಎಲ್ಪಿಜಿ ಸಿಲಿಂಡರ್ ಬೆಲೆ ರೂ.೫೦ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನೊಂದೆಡೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡೆಗಳು ರಾಜ್ಯದ ಪಾಲಿಗೆ ದುಃಸ್ವಪ್ನವಾಗಿವೆ. ನ್ಯಾಯಯುತವಾಗಿ ರಾಜ್ಯದ ಪಾಲಿಗೆ ಸಂದಾಯವಾಗಬೇಕಿದ್ದ ಅನುದಾನಗಳು ಕಡಿತವಾಗಿವೆ. ರಾಜ್ಯದ ಜನರಿಂದ ಸುಮಾರು ರೂ.4,50,000 ಕೋಟಿ ತೆರಿಗೆ ಸಂಗ್ರಹವಾಗುತ್ತಿದ್ದರೂ, ಕೇವಲ ರೂ.50,000 ಕೋಟಿಗಳು ಮಾತ್ರ ರಾಜ್ಯಕ್ಕೆ ಸಂದಾಯವಾಗುತ್ತಿವೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಬಜೆಟ್ನಲ್ಲಿ ಘೋಷಿಸಿದ ಯಾವ ಹಣವನ್ನೂ ಬಿಡುಗಡೆಗೊಳಿಸಿಲ್ಲ ಎಂದು ರಾಜ್ಯದ ಆರ್ಥಿಕ ಇಲಾಖೆ ದೂರುತ್ತಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುತ್ತಿರುವ ಗ್ರಾಮೀಣ ಕೃಷಿ ಕೂಲಿಕಾರರಿಗೆ ಸಂದಾಯವಾಗಬೇಕಿದ್ದ ರೂ. 900 ಕೋಟಿಗಳಷ್ಟು ಹಣವನ್ನು ಬಿಡುಗಡೆಗೊಳಿಸದೆ ಸತಾಯಿಸಲಾಗುತ್ತಿದೆ. ಕೆಲಸ ಮಾಡಿದ ಕೂಲಿ ಕಾರ್ಮಿಕರು ವೇತನಕ್ಕಾಗಿ ಪರದಾಡುತ್ತಿದ್ದಾರೆ. ಬೆಂಗಳೂರಿನ ಮೆಟ್ರೋ ದರಗಳನ್ನು ರಾಜ್ಯ ಸರ್ಕಾರದ ಸಹಮತದೊಂದಿಗೆ ಹಿಗ್ಗಾಮುಗ್ಗಾ ಏರಿಸಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿಸಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಜಾರಿಗೊಳಿಸಬೇಕಾಗಿದ್ದ ರೈಲ್ವೆ ಯೋಜನೆಗಳನ್ನು ನೆನೆಗುದಿಯಲ್ಲಿ ಇಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ಕಳಪೆ ಸಾಧನೆ ಮಾಡಿರುವ ಕೇಂದ್ರ ಸರ್ಕಾರ ತನ್ನ ಕಡು ಜನ ವಿರೋಧಿ ಧೋರಣೆಯನ್ನು ತೋರಿಸುತ್ತಿದೆ. ಆದರೆ, ತನ್ನ ಚುನಾವಣಾ ದಾಳವನ್ನಾಗಿ ಧರ್ಮವನ್ನು ರಾಜಕೀಯದಲ್ಲಿ ಬೆರೆಸಿ ಕೋಮು ಸಾಮರಸ್ಯವನ್ನು ಹಾಳು ಮಾಡಿದ ಅಪಕೀರ್ತಿಯಲ್ಲಿ ಮಾತ್ರ ಮುಂಚೂಣಿಯಲ್ಲಿದೆ! ಈ ಮಧ್ಯೆ ಪೈಪೋಟಿಗೆ ಬಿದ್ದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ವೇತನ, ಭತ್ಯೆಗಳನ್ನು ವಿರೋಧ ಪಕ್ಷಗಳ ಬೆಂಬಲದಿಂದ ದುಪ್ಪಟ್ಟುಗೊಳಿಸಿಕೊಂಡಿವೆ.
ಹೆಚ್ಚುತ್ತಿರುವ ಬಂಡವಾಳಗಾರರ ಆಸ್ತಿ!
ಭಾರತದ ಶತಕೋಟ್ಯಾಧೀಶರ ಸಂಖ್ಯೆ 334ಕ್ಕೆ ಏರಿಕೆಯಾಗಿದ್ದು, ಗೌತಮ್ ಅದಾನಿಯವರ ಸಂಪತ್ತು 11,61,800 ಕೋಟಿ ರೂಪಾಯಿಗೆ, ಮುಖೇಶ್ ಅಂಬಾನಿಯ ಸಂಪತ್ತು 10,14,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಶ್ರೀಮಂತ ಉದ್ಯಮಿಗಳ 16.35 ಲಕ್ಷ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲಾಗಿದೆ. ಕರ್ನಾಟಕದ ಎಲ್ಲಾ ಶಾಸಕರ ಆಸ್ತಿಯ ಮೌಲ್ಯ 14,179 ಕೋಟಿ ರೂಪಾಯಿಗಳು. ಅಂದರೆ ಜನ ಪ್ರತಿನಿಧಿಗಳ ಆದಾಯ, ಉದ್ಯಮಿಗಳ ಆದಾಯ ಮುಗಿಲು ಮುಟ್ಟಿರುವ ಸಂದರ್ಭದಲ್ಲಿ ದೇಶದ-ರಾಜ್ಯದ ಸಾಲದ ಹೊರೆಯೂ ಅರ್ಥಾತ್ ಜನಸಾಮಾನ್ಯರ ಮೇಲಿನ ತಲಾವಾರು ಸಾಲದ ಹೊರೆಯೂ ಹೆಚ್ಚಾಗುತ್ತಿದೆ! ದೇಶ ಮತ್ತು ರಾಜ್ಯ ‘ಅಭಿವೃದ್ಧಿ’ ಪಥದಲ್ಲಿ ಮುಂದುವರೆಯುತ್ತಿವೆ ಎಂದು ಆಳ್ವಿಕರ ಪರವಾಗಿರುವ ಬಾಲಬಡುಕ ಮಾಧ್ಯಮಗಳು ಪುಂಖಾನುಪುಂಖವಾಗಿ ಪ್ರಚಾರ ಮಾಡುವುದನ್ನು, ಸರಳವಾಗಿ ಅದು ಕೆಲವೇ ಜನ ಬಂಡವಾಳಗಾರರ, ರಾಜಕಾರಣಿಗಳ ಅಭಿವೃದ್ಧಿ ಮಾತ್ರ ಎಂದು ಅರ್ಥ ಮಾಡಿಕೊಳ್ಳಬೇಕು. ದುಡಿಯುವ ಜನಸಾಮಾನ್ಯರು ಸಾಲದ ಹೊರೆ ಹೊತ್ತು ಜೀವನ ನಿರ್ವಹಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ.
ಹೋರಾಟದ ಮುಂಚೂಣಿಯಲ್ಲಿ ಎಸ್ಯುಸಿಐ(ಕಮ್ಯುನಿಸ್ಟ್)
ನಮ್ಮ ಪಕ್ಷ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಮಹಾನ್ ಮಾರ್ಕ್ಸ್ ವಾದಿ ಚಿಂತಕರಲ್ಲಿ ಒಬ್ಬರಾದ ಹಾಗೂ ಎಸ್ಯುಸಿಐ(ಸಿ)ನ ಸಂಸ್ಥಾಪಕರಾದ ಕಾಮ್ರೇಡ್ ಶಿವದಾಸ್ ಘೋಷ್ರ ಚಿಂತನೆಗಳನ್ನು ಆಧರಿಸಿ ದೇಶದಲ್ಲಿ ಸತತವಾಗಿ ಜನಹೋರಾಟಗಳನ್ನು ಬೆಳೆಸುತ್ತಿದೆ. ಸ್ವಾತಂತ್ರ್ಯಾ ನಂತರದಲ್ಲಿ ದೇಶದಲ್ಲಿ ಸ್ಥಾಪಿತಗೊಂಡ ಈ ಬಂಡವಾಳಶಾಹಿ ವ್ಯವಸ್ಥೆಯೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಸಾರುತ್ತಾ ಬಂದಿದೆ. ಈ ವ್ಯವಸ್ಥೆ ಕಿತ್ತೊಗೆದು ಸಮಾಜವಾದಿ ಸಮಾಜ ನಿರ್ಮಾಣ ಮಾಡುವುದೇ ಅಂತಿಮ ಗುರಿ ಎಂದು ನಮ್ಮ ಪಕ್ಷ ನಂಬಿದೆ. ಅದರ ಭಾಗವಾಗಿ ಜನತೆಯ ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಸಮರಶೀಲ ಹೋರಾಟ ಬೆಳೆಸುವುದು ಈ ಘಳಿಗೆಯ ಅವಶ್ಯಕತೆಯಾಗಿದೆ. ರಾಜ್ಯದಲ್ಲಿಯೂ ರೈತ-ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ ಯುವಜನರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ನಮ್ಮ ಪಕ್ಷವು ಹಲವು ಯಶಸ್ವಿ ಹೋರಾಟಗಳನ್ನು ಮುನ್ನಡೆಸಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ ರಾಜ್ಯಮಟ್ಟದ ಬೃಹತ್ ಹೋರಾಟವನ್ನು ಬೆಂಗಳೂರಿನಲ್ಲಿ ಮೇ 14,2025 ರಂದು ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಈ ಕೆಳಕಂಡ ಹಕ್ಕೊತ್ತಾಯಗಳನ್ನು ಸರ್ಕಾರಗಳ ಮುಂದಿಟ್ಟಿದೆ.
ಹಕ್ಕೊತ್ತಾಯಗಳು
1. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೀವನಾವಶ್ಯಕ ವಸ್ತುಗಳ ಮೇಲೆ ಹೆಚ್ಚಿಸಿರುವ ಎಲ್ಲಾ ಬೆಲೆಗಳನ್ನು ಈ ಕೂಡಲೇ ಹಿಂತೆಗೆದುಕೊಳ್ಳಿ.
2. ಎಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ. ಜೊತೆಗೆ ಅವಶ್ಯಕ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿ.
3. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಕೆಲಸದ ದಿನಗಳನ್ನು 200 ಕ್ಕೆ ಹೆಚ್ಚಿಸಿ. ಅವರ ಕೂಲಿಯನ್ನು ರೂ. 600 ಕ್ಕೆ ನಿಗದಿಗೊಳಿಸಿ.
4. ಬೆಲೆಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯಕ್ಕೆ ಸರಕಾರದಿಂದ ನೆರವು ನೀಡಿ ಮತ್ತು ರೈತರ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸಿ.
5. ವಿದ್ಯುತ್ ಮಸೂದೆ-2022 (ತಿದ್ದುಪಡಿ)ನ್ನು ಹಿಂತೆಗೆದುಕೊಳ್ಳಿ. ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಿ.
6. 6000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ಕೂಡಲೇ ಕೈಬಿಡಿ ಹಾಗೂ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು, ಶಿಕ್ಷಕ ಸಿಬ್ಬಂದಿಯನ್ನು ಒದಗಿಸಿ.
7. ನಿರುದ್ಯೋಗದಿಂದ ತತ್ತರಿಸಿರುವ ಯುವಜನರಿಗೆ ಉದ್ಯೋಗ ನೀಡಲು ತಕ್ಷಣವೇ ಸರಕಾರಿ ಇಲಾಖೆಗಳ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಕೆಪಿಎಸ್ಸಿ ಸೇರಿದಂತೆ ನೇಮಕಾತಿಯಲ್ಲಿ ನಡೆಯುವ ಎಲ್ಲಾ ಹಂತದ ಭ್ರಷ್ಟಾಚಾರವನ್ನು ಮಟ್ಟ ಹಾಕಿ.
8. ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಘೋಷಿಸಿ. ಅಲ್ಲಿಯವರೆಗೆ ಕನಿಷ್ಠ ವೇತನ ಪಾವತಿಸಿ. ಎಲ್ಲಾ ಇಲಾಖೆಗಳಲ್ಲಿರುವ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ.
9. ಈ ಕೂಡಲೇ ಹೆಚ್ಚಿಸಿರುವ ದುಬಾರಿ ಬೆಂಗಳೂರು ಮೆಟ್ರೋ ದರಗಳನ್ನು ಹಿಂತೆಗೆದುಕೊಳ್ಳಿ.
10. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರವೇ ಪಟ್ಟಾ ಒದಗಿಸಿ.
11. ಮಕ್ಕಳ ಮಾನಸಿಕ ಆರೋಗ್ಯ ಮತ್ತು ವ್ಯಕ್ತಿತ್ವದ ಬೆಳವಣಿಗೆಯನ್ನು ಕಾಪಾಡಲು ಎಲ್ಲಾ ಆನ್ಲೈನ್ ಅಶ್ಲೀಲ ಕಾರ್ಯಕ್ರಮಗಳನ್ನು ಈ ಕೂಡಲೇ ನಿಲ್ಲಿಸಿ.