
ಹಿಟ್ಲರನ ಫ್ಯಾಷಿವಾದವನ್ನು ಹತ್ತಿಕ್ಕಿದ ವಿಜಯಕ್ಕೆ 80 ವರ್ಷ
ಭಾಗ 1
1945ರ ಮೇ 2ರಂದು ಸೋವಿಯತ್ ಒಕ್ಕೂಟದ ಕೆಂಪು ಸೈನ್ಯವು ರಾಜಧಾನಿ ಬರ್ಲಿನ್ ತಲುಪಿ, ಜರ್ಮನಿಯನ್ನು ನಾಜಿ ಆಳ್ವಿಕೆಯಿಂದ ಮುಕ್ತಗೊಳಿಸಿತು. ಹಿಮ್ಮೆಟ್ಟುತ್ತಿದ್ದ ಜರ್ಮನ್ ಸೈನ್ಯವನ್ನು ಬೆನ್ನಟ್ಟಿಕೊಂಡು ಬಂದ ಕೆಂಪು ಸೈನ್ಯವು ಅಲ್ಲಿನ ಸಂಸತ್ ಭವನ ‘ರೀಚ್ಸ್ಟಾಗ್’ನ್ನು ವಶಪಡಿಸಿಕೊಂಡು ಆ ಕಟ್ಟಡದ ಗೋಪುರದ ಮೇಲೆ ಕೆಂಬಾವುಟವನ್ನು ಹಾರಿಸಿತು. ಇದರೊಂದಿಗೆ, ಜರ್ಮನಿ-ಇಟಲಿ-ಜಪಾನ್ಗಳ ಫ್ಯಾಷಿಸ್ಟ್ ದುಷ್ಟಕೂಟವು ಮಣ್ಣಾದಂತಾಯಿತು. 1945ರ ಮೇ 8ರಂದು ಜರ್ಮನಿಯಲ್ಲಿ ಅಧಿಕಾರದಲ್ಲಿದ್ದವರು ಬೇಷರತ್ತಾಗಿ ಕೆಂಪು ಸೈನ್ಯಕ್ಕೆ ಶರಣಾಗುವ ಕರಾರಿಗೆ ಸಹಿ ಹಾಕಿದರು. 2025ರ ಮೇ 8ರಂದು ಈ ಅಮೋಘ ವಿಜಯದ 80ನೇ ವಾರ್ಷಿಕ.
ಹಿಟ್ಲರ್ ಬೆಳೆದದ್ದು ಹೇಗೆ…
1914 ರಿಂದ 1918ರವರೆಗೆ ಜರ್ಮನಿ, ಆಸ್ಟ್ರಿಯಾ, ಹಂಗರಿ ಮತ್ತು ಟರ್ಕಿ ಒಂದು ಕೂಟವನ್ನು ರಚಿಸಿಕೊಂಡಿದ್ದವು ಮತ್ತು ಇನ್ನೊಂದರಲ್ಲಿ ಫ್ರಾನ್ಸ್, ಬ್ರಿಟನ್, ರಷ್ಯಾ, ಇಟಲಿ, ಜಪಾನ್ ಹಾಗೂ ನಂತರದಲ್ಲಿ ಅಮೇರಿಕ ಇದ್ದವು. ಈ ಎರಡು ಕೂಟಗಳ ನಡುವೆ ಮೊದಲನೆಯ ಮಹಾಯುದ್ಧವು ನಡೆದು ಜರ್ಮನಿಯ ಮಿತ್ರಕೂಟಕ್ಕೆ ಹೀನಾಯವಾದ ಸೋಲಾಯಿತು. ಆ ಸಮಯದಲ್ಲಿ, ಜರ್ಮನ್ ಚಕ್ರಾಧಿಪತ್ಯವು ಪತನವಾಗಿ, ಅದರ ಸ್ಥಾನದಲ್ಲಿ ‘ವೈಮರ್ ಗಣರಾಜ್ಯ’ ಎಂಬ ಹೆಸರಿನ ಹೊಸ ಜನತಾಂತ್ರಿಕ ಗಣರಾಜ್ಯವು ಅಸ್ತಿತ್ವಕ್ಕೆ ಬಂದಿತ್ತು. ಸೋಲಿನ ನಂತರ, 1919ರ ಜೂನ್ನಲ್ಲಿ ಅದರ ಮುಖಂಡರು, ಅತ್ಯಂತ ಏಕಪಕ್ಷೀಯವಾಗಿದ್ದ ಮತ್ತು ತಮ್ಮ ಮೇಲೆ ಫ್ರಾನ್ಸ್ ಹೇರಿದ ‘ವರ್ಸೈಲ್ ಒಪ್ಪಂದ’ಕ್ಕೆ ಸಹಿ ಮಾಡಲೇಬೇಕಾದ ಒತ್ತಡಕ್ಕೆ ಒಳಗಾದರು. ಮಹಾಯುದ್ಧವನ್ನು ಆರಂಭಿಸಿದ ಹೊಣೆಗಾರಿಕೆಯನ್ನು ಜರ್ಮನಿ ಹೊರಬೇಕಾಯಿತು ಮತ್ತು ಅದರಿಂದ ಉಂಟಾದ ಒಟ್ಟು ನಷ್ಟವನ್ನು ಜರ್ಮನಿಯೇ ಭರಿಸಬೇಕಾಯಿತು. ಒಪ್ಪಂದದ ಪ್ರಕಾರ ಜರ್ಮನಿಯು ತನ್ನ ನೆಲವನ್ನು ಕಳೆದುಕೊಂಡಿತು ಮತ್ತು ನಿಶ್ಯಸ್ತ್ರೀಕರಣ ಮುಂತಾದ ಶಿಕ್ಷೆಗೆ ಒಳಗಾಯಿತು. ಯುದ್ಧದ ಸಾಲ, ನಷ್ಟ ಪರಿಹಾರ ಇತ್ಯಾದಿ ಪಾವತಿಗಳು ಹಣದುಬ್ಬರವನ್ನು ತೀವ್ರವಾಗಿ ಏರಿಸಿದವು ಮತ್ತು ಜರ್ಮನ್ ಕರೆನ್ಸಿ ಡಾಯಿಷ್ ಮಾರ್ಕ್ ವಿಪರೀತ ಅಪಮೌಲ್ಯಕ್ಕೆ ಗುರಿಯಾಯಿತು. ಇದರಿಂದ ಜರ್ಮನರು ತಮ್ಮ ಉಳಿತಾಯವನ್ನೆಲ್ಲ ಕಳೆದುಕೊಂಡರು, ಆದರೆ ಕೈಗಾರಿಕೋದ್ಯಮಿಗಳು ತಮ್ಮಲ್ಲಿದ್ದ ಸರಕು ರೂಪದ ಸಂಪತ್ತು ಹಾಗೂ ವಿದೇಶಿ ವಾಣಿಜ್ಯ-ವ್ಯವಹಾರದ ಕಾರಣದಿಂದ ಹಣದುಬ್ಬರದ ಹೊಡೆತದಿಂದ ಪಾರಾದರು. ನಿರುದ್ಯೋಗ ಮತ್ತು ತೀವ್ರ ಬಡತನಕ್ಕೆ ಸಿಲುಕಿದ ಜರ್ಮನರಲ್ಲಿ ಅತೃಪ್ತಿ ಹಾಗೂ ಆಕ್ರೋಶ ಉಂಟಾಗಿತ್ತು. ಇದು ಯುದ್ಧೋತ್ತರ 1920ರ ದಶಕದಲ್ಲಿ ಜರ್ಮನಿಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೋಭೆಯ ಪರಿಸ್ಥಿತಿಯಾಗಿತ್ತು.
ಅದೇ ಕಾಲಕ್ಕೆ ಸೋವಿಯತ್ ಒಕ್ಕೂಟದ ಸಮಾಜವಾದಿ ಆರ್ಥಿಕತೆಯು ದಾಪುಗಾಲು ಹಾಕಿಕೊಂಡು ಸಮೃದ್ಧಿಯತ್ತ ಮುನ್ನುಗ್ಗುತ್ತಿತ್ತು. ಪ್ರಪಂಚದಾದ್ಯಂತ ಜನರು ಆ ಕಡೆಗೆ ಆಕರ್ಷಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ, ಹಿಟ್ಲರ್, ರಾಷ್ಟ್ರೀಯ ಅಂಧಾಭಿಮಾನ ಹಾಗೂ ಸಮಾಜವಾದದ ಘೋಷಣೆಗಳನ್ನು ಬೆಸೆದು ತನ್ನ ನ್ಯಾಷನಲ್ ಸೋಷಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ(ನಾಜಿ಼ ಪಾರ್ಟಿ)ಯನ್ನು ಸ್ಥಾಪಿಸಿದ. ವರ್ಸೈಲ್ ಒಪ್ಪಂದದ ಕಠಿಣ ಆರ್ಥಿಕ ನಿಬಂಧನೆಗಳು ಮತ್ತು ರಾಷ್ಟ್ರೀಯ ಅಪಮಾನದ ಭಾವನೆಯಿಂದ ಆಕ್ರೋಶಭರಿತರಾಗಿದ್ದ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿದ ಹಿಟ್ಲರ್, ಜರ್ಮನ್ನರು ಶ್ರೇಷ್ಠ ಜನಾಂಗ, ಇಡೀ ಜಗತ್ತನ್ನೇ ಆಳಲು ಸಮರ್ಥರು, ಅವರನ್ನು ತಪ್ಪಾಗಿ ನಡೆಸಿಕೊಳ್ಳಲಾಗಿದೆ ಎಂದು ಪದೇಪದೇ ಜರ್ಮನ್ನರ ತಲೆಗೆ ತುಂಬಿದ. ವರ್ಸೈಲ್ ಒಪ್ಪಂದದ ರದ್ದಿಗೆ ಒತ್ತಾಯಿಸಿದ. ಅಧಿಕಾರದಲ್ಲಿ ಕುಳಿತಿದ್ದ ಜರ್ಮನ್ ಪ್ರಜಾಸತ್ತಾತ್ಮಕ ಗಣರಾಜ್ಯ ಆಡಳಿತದ ವಿರುದ್ಧ ಆಕ್ರೋಶ ಉದ್ದೀಪಿಸಿದ. “ಇಲ್ಲಿಯವರೆಗೆ ಅರೆ ಮನಸ್ಸಿನಿಂದ ತಣ್ಣಗೆ ತೆಪ್ಪಗಿರುವವರೇ ಜರ್ಮನಿಗೆ ಶಾಪವಾಗಿ ಪರಿಣಮಿಸಿದ್ದಾರೆ. ನಮ್ಮ ವಿಮೋಚನೆಗೆ ಆರ್ಥಿಕ ನೀತಿಗಳನ್ನು ಬಿಟ್ಟು, ಕೈಗಾರಿಕೆಗಳನ್ನು ಬಿಟ್ಟು ಇನ್ನೂ ಹೆಚ್ಚಿನದೇನೋ ಬೇಕಾಗಿದೆ, ಅವರಿಗೆ ಹೆಮ್ಮೆ, ಇಚ್ಛಾಶಕ್ತಿ, ರಕ್ಷಣಾ ಬಲ, ದ್ವೇಷ, ಪ್ರತೀಕಾರ ಮತ್ತು ಮತ್ತೆಮತ್ತೆ ದ್ವೇಷ ಬೇಕಾಗಿದೆ” ಎಂದು ಹಿಟ್ಲರ್ ವಾದಿಸಿದ. ಅದೇ ಕಾಲಕ್ಕೆ ಯಹೂದಿಗಳ ವಿರುದ್ಧ ದ್ವೇಷಭಾವದ ಪ್ರಚಾರವನ್ನು ಆರಂಭಿಸಲಾಯಿತು.
ನಾಜಿ಼ ಪಕ್ಷದ ಮೂಲ ಕೇಂದ್ರ ಮ್ಯುನಿಚ್ ನಗರವಾಗಿದ್ದರೂ ಸಹ, 1923ರ ನವೆಂಬರ್ ತಿಂಗಳಲ್ಲಿ ಅದು ರಾಷ್ಟ್ರೀಯವಾಗಿ ಬೆಳೆದು ಗಮನ ಸೆಳೆಯಿತು. ಆ ತಿಂಗಳಲ್ಲಿ ಹಿಟ್ಲರ್ ನೇತೃತ್ವದ ನಾಜಿ಼ ಪಕ್ಷವು ಹಿಂಸಾತ್ಮಕ ದಂಗೆಯ ಮೂಲಕ ಸರ್ಕಾರವನ್ನು ಬುಡಮೇಲು ಮಾಡಲು ವಿಫಲ ಯತ್ನ ನಡೆಸಿತು. ಪರಿಣಾಮವಾಗಿ, ಹಿಟ್ಲರ್ ಬಂಧನಕ್ಕೊಳಗಾದ ಮತ್ತು ನಾಜಿ಼ ಪಕ್ಷವು ತಾತ್ಕಾಲಿಕ ನಿಷೇಧಕ್ಕೆ ಒಳಗಾಯಿತು. 1929ರಲ್ಲಿ ಇಡೀ ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ವಿಶ್ವವೇ ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಯಿತು. ಕೋಟ್ಯಾಂತರ ಜರ್ಮನ್ನರು ಉದ್ಯೋಗ ಕಳೆದುಕೊಂಡರು, ನಿರುದ್ಯೋಗ, ಬಡತನ, ವಸತಿ ಹೀನತೆ 1930ರ ದಶಕದ ಆರಂಭದಲ್ಲಿ ಗಂಭೀರ ಸಮಸ್ಯೆಯನ್ನು ಒಡ್ಡಿದವು. ಸರ್ಕಾರದ ಮೇಲಿನ ಜನರ ನಂಬಿಕೆ ಛಿದ್ರಗೊಂಡಿತು. ಇಂತಹ ಅಭದ್ರತೆಯ, ಅಸ್ತವ್ಯಸ್ತತೆಯ ಪರಿಸ್ಥಿತಿ ಹಿಟ್ಲರನಂತಹ ಮಹತ್ವಾಕಾಂಕ್ಷಿ ಫ್ಯಾಷಿಸ್ಟ್ ನಾಯಕನ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು.
ಅಧಿಕಾರದ ಗದ್ದುಗೆ ಏರಿದ…
ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಹಿಂಸಾತ್ಮಕ ಪ್ರಯತ್ನದಲ್ಲಿ ಸೋಲುಂಡ ನಂತರ ನಾಜಿ಼ ಪಕ್ಷವು ತನ್ನ ತಂತ್ರಗಾರಿಕೆಯನ್ನು ಬದಲಾಯಿಸಿಕೊಂಡಿತು. ಚುನಾವಣೆಯನ್ನು ಕೈವಶ ಮಾಡಿಕೊಳ್ಳುವ ಗುರಿಯಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿತು. ಅಂದು ತಮ್ಮನ್ನಾಳುತ್ತಿದ್ದವರ ಮೇಲೆ ಸಾಕಷ್ಟು ಜರ್ಮನ್ನರು ವಿಶ್ವಾಸ ಕಳೆದುಕೊಂಡಿದ್ದರು. ಆಗ ಸೃಷ್ಟಿಯಾಗಿದ್ದ ರಾಜಕೀಯ ನಿರ್ವಾತದಲ್ಲಿ ಒಂದೆಡೆ ನಾಜಿ಼ ಪಕ್ಷ ಮತ್ತು ಮತ್ತೊಂದೆಡೆ ಜರ್ಮನ್ ಕಮ್ಯುನಿಸ್ಟ್ ಪಕ್ಷಗಳು ಕ್ರಮೇಣ ಜನಪ್ರಿಯತೆಯನ್ನು ಪಡೆಯಲಾರಂಭಿಸಿದವು. ಕಮ್ಯುನಿಸ್ಟ್ ಪಕ್ಷದ ಏಳಿಗೆಯನ್ನು ಹಿಟ್ಲರನಿಂದ ಸಹಿಸಲಾಗಲಿಲ್ಲ. ಜರ್ಮನಿಯ ಎಲ್ಲಾ ಸಮಸ್ಯೆಗಳಿಗೆ ಕಮ್ಯುನಿಸ್ಟರು ಮತ್ತು ಯಹೂದಿಗಳೇ ಕಾರಣ ಎಂದು ಪ್ರಚಾರವನ್ನು ಅವನು ನಡೆಸಿದ.
1930ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಿಟ್ಲರ್, “ಜರ್ಮನಿಯು ಮತ್ತೆ ಮೇಲೇಳಲು ಹಾಗೂ ಅದನ್ನು ಕಂಡು ಇತರರು ಭಯಪಡುವಂತಾಗಲು, ತನ್ನ ಜನರ ಜನ್ಮಸಿದ್ಧ ಹಕ್ಕುಗಳಾದ ಘನತೆ, ಸುರಕ್ಷತೆ ಮತ್ತು ಶ್ರೀಮಂತಿಕೆಯನ್ನು ಮರುಸ್ಥಾಪಿಸಲು, ಹಳೆಯ ಜರ್ಮನಿಯ ಗುಣಗಳಾದ ಶಿಸ್ತು, ಸ್ವಾವಲಂಬನೆ ಮತ್ತು ಆತ್ಮಗೌರವಗಳನ್ನು ಮತ್ತೆ ಪಡೆಯಲು, ಅದು ಒಬ್ಬ ಹೊಸ ವ್ಯಕ್ತಿಯ ಕಡೆಗೆ, ಹೊಸ ಚಳವಳಿಯ ಕಡೆಗೆ ನೋಡಲಿ……ಜರ್ಮನ್ನರು ಭೂಮಿಯ ಮೇಲಿನ ಸರ್ವಶ್ರೇಷ್ಠರು. ಯುದ್ಧದಲ್ಲಿ ಸೋಲಾಗಲು ಮತ್ತು ಅದರಿಂದ ಇಷ್ಟೊಂದು ಸಂಕಷ್ಟಕ್ಕೀಡಾಗಲು ನೀವು ಕಾರಣರಲ್ಲ. ನಿಮ್ಮ ಬಗ್ಗೆ ದ್ವೇಷ, ಅಸೂಯೆ ಇರುವವರು 1918ರಲ್ಲಿ ನಿಮಗೆ ದ್ರೋಹ ಬಗೆದಿರುವುದೇ ಅದಕ್ಕೆ ಕಾರಣ….. ಜರ್ಮನಿ ಎಚ್ಚರಗೊಂಡು ತನ್ನ ಬಲವನ್ನು ಉದ್ದೀಪಿಸಲಿ, ತನ್ನ ಹಿಂದಿನ ಮಹಾನತೆಯನ್ನು ನೆನಪಿಸಿಕೊಳ್ಳಲಿ ಮತ್ತು ಪ್ರಪಂಚದಲ್ಲಿ ತನ್ನ ಪುರಾತನ ಸ್ಥಾನವನ್ನು ಮತ್ತೆ ಪಡೆದುಕೊಳ್ಳಲಿ, ಹಾಗೂ ಅದರ ಆರಂಭಕ್ಕಾಗಿ ಬರ್ಲಿನ್ನಿನಲ್ಲಿ (ಭದ್ರವಾಗಿ ಕೂತಿರುವ ಅಧಿಕಾರಸ್ಥರ) ಹಳೆಯ ಕೂಟವನ್ನು ಕಿತ್ತೊಗೆಯೋಣ”(ಅಲೆನ್ ಬುಲಕ್ ರಚಿತ ‘ಹಿಟ್ಲರ್’ ಕೃತಿಯಿಂದ) ಎಂದು ಅಬ್ಬರಿಸಿದ.
ಹೀಗೆ, ಜರ್ಮನಿಯನ್ನು ಯುರೋಪಿನಲ್ಲಿ ಅಷ್ಟೇ ಏಕೆ, ಜಗತ್ತಿನ ಪ್ರಬಲ ಶಕ್ತಿಯಾಗಿ ರೂಪಿಸುವ ಆಶ್ವಾಸನೆ ಮಾತ್ರವಲ್ಲದೆ ಮೊದಲನೇ ಮಹಾಯುದ್ಧದಲ್ಲಿ ಜರ್ಮನಿಯು ಕಳೆದುಕೊಂಡ ಭೂಪ್ರದೇಶವನ್ನು ಮರಳಿ ಗಳಿಸುವ, ದೇಶದಲ್ಲಿ ಶಕ್ತಿಶಾಲಿಯಾದ ಸರ್ವಾಧಿಕಾರಿ ಸರ್ಕಾರವನ್ನು ಸ್ಥಾಪಿಸುವ ಭರವಸೆ ಹಿಟ್ಲರ್ ನೀಡಿದ. ರಾಷ್ಟ್ರೀಯ ಶಾಸನ ಸಭೆಗೆ ನಡೆದ ಆ ಚುನಾವಣೆಯಲ್ಲಿ ನಾಜಿ಼ ಪಕ್ಷವು ಶೇ.18ರಷ್ಟು ಮತವನ್ನು ಪಡೆಯಿತು. ಅದೇ ವರ್ಷ ನಡೆದ ಪ್ರಾಂತೀಯ ಮತ್ತು ಸ್ಥಳೀಯ ಚುನಾವಣೆಗಳಲ್ಲೂ ಅದು ಉತ್ತಮ ಫಲಿತಾಂಶವನ್ನು ದಾಖಲಿಸಿತು. 1932ರ ಸಂಸದೀಯ ಚುನಾವಣೆಯಲ್ಲಿ ನಾಜಿ಼ ಪಕ್ಷವು ಶೇ.37 ಮತ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. 1933ರ ಜನವರಿಯಲ್ಲಿ ನಾಜಿ಼ ಪಕ್ಷದ ಒತ್ತಡಕ್ಕೆ ಮಣಿದು ಜರ್ಮನ್ ಅಧ್ಯಕ್ಷ ಪಾಲ್ ವಾನ್ ಹಿಂಡೆನ್ಬರ್ಗ್ ಜರ್ಮನಿಯ ಚಾನ್ಸಲರ್ ಆಗಿ ಹಿಟ್ಲರನನ್ನು ನೇಮಕ ಮಾಡಬೇಕಾಯಿತು.
ನಂತರ ಹಿಟ್ಲರ್ ಇನ್ನೊಂದು ಆಟವಾಡಿದ. 1933ರ ಫೆಬ್ರವರಿ 27ರಂದು ಜರ್ಮನ್ ಸಂಸತ್ ಭವನವಾದ ‘ರೀಚ್ಸ್ಟಾಗ್’ಗೆ ಯಾರೋ ಬೆಂಕಿಯಿಟ್ಟರು. ಈ ಕೃತ್ಯಕ್ಕೆ ಕಮ್ಯುನಿಸ್ಟರೇ ಕಾರಣ ಎಂದು ತಕ್ಷಣವೇ ದೂಷಿಸಿದ ಹಿಟ್ಲರ್ 81 ಮಂದಿ ಕಮ್ಯುನಿಸ್ಟ್ ಪಕ್ಷದ ಸಂಸದರನ್ನು ಉಚ್ಛಾಟಿಸುವ, ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವ ಸುಗ್ರೀವಾಜ್ಞೆಯನ್ನು ಜಾರಿಗೆ ತಂದ. ಕಮ್ಯುನಿಸ್ಟ್ ಮತ್ತು ಸಮಾಜವಾದಿಗಳನ್ನು ಉಚ್ಛಾಟನೆ ಮಾಡಲಾಯಿತು, ಹಲವಾರು ನಾಯಕರನ್ನು ಬಂಧಿಸಲಾಯಿತು. ಈ ಮೂಲಕ ಜರ್ಮನ್ ಮತದಾರರು ಕಮ್ಯುನಿಸ್ಟರಿಂದ ದೂರ ಸರಿಯುವಂತೆ ಮಾಡುವಲ್ಲಿ, ಅವರ ಮೇಲೆ ತನ್ನ ಹಿಡಿತವನ್ನು ಬಿಗಿ ಮಾಡಿಕೊಳ್ಳುವಲ್ಲಿ ಹಿಟ್ಲರ್ ಯಶಸ್ವಿಯಾದ. ಕೆಲವು ಇತಿಹಾಸಕಾರರು, ನಾಜಿ಼ಗಳೇ ತಮ್ಮ ಕಾರ್ಯ ಸಾಧನೆಗಾಗಿ ರೀಚ್ಸ್ಟಾಗಿಗೆ ಬೆಂಕಿ ಇಡಿಸಿದರು ಎಂದು ನಂಬುತ್ತಾರೆ. 1934ರ ಆಗಸ್ಟ್ ನಲ್ಲಿ ಅಧ್ಯಕ್ಷ ಹಿಂಡೆನ್ಬರ್ಗ್ ಮೃತರಾದರು. ಹಿಟ್ಲರ್ ಆಗ ತನ್ನನ್ನು ತಾನೆ ಫ್ಯೂರರ್(ಅಧಿನಾಯಕ) ಎಂದು ಘೋಷಿಸಿಕೊಂಡ. ಅಲ್ಲಿಂದ ಹಿಟ್ಲರ್ ಜರ್ಮನಿಯ ಸರ್ವಾಧಿಕಾರಿಯಾಗಿ ಮೆರೆದ.
ಆದರೆ ಹಿಟ್ಲರ್ ಅಧಿಕಾರವನ್ನು ದಂಗೆಯ ಮೂಲಕ ವಶಪಡಿಸಿಕೊಳ್ಳಲಿಲ್ಲ ಅಥವಾ ನೇರವಾಗಿ ಚುನಾಯಿತನಾಗಿ ಅಧಿಕಾರಕ್ಕೆ ಬರಲಿಲ್ಲ. ಇಲ್ಲೂ ಅವನು ತನ್ನ ಅನುಕೂಲಕ್ಕೆ ತಕ್ಕಂತೆ ವಿಷಯಗಳನ್ನು ತಿರುಚಿದನು. 1936 ರಲ್ಲಿ ಸಂಸತ್ ಚುನಾವಣೆ ನಡೆಯಬೇಕಿದ್ದಾಗ, ನಾಜಿ಼ ಜರ್ಮನ್ ಆಡಳಿತವು ಸಾಮಾನ್ಯ ಚುನಾವಣೆಯ ಬದಲು, ಚಾನ್ಸೆಲರ್ ಮತ್ತು ಅಧ್ಯಕ್ಷರ ಹುದ್ದೆಗಳನ್ನು ಸಂಯೋಜಿಸುವುದನ್ನು ಮತದಾರರು ಅನುಮೋದಿಸುತ್ತಾರೆಯೇ ಎಂದು ಕೇಳುವ ಜನಮತಗಣನೆ (ನಿರ್ದಿಷ್ಟ ನೀತಿಯ ಮೇಲೆ ನೇರ ಮತ) ನಡೆಸಿತು. ಅಡಾಲ್ಫ್ ಹಿಟ್ಲರನನ್ನು ಫ್ಯೂರರ್ ಆಗಿ ಮತ್ತು ಅವನಿಗೆ ರೀಚ್ ಚಾನ್ಸೆಲರ್ ಆಗಿ ಅಧ್ಯಕ್ಷೀಯ ಅಧಿಕಾರ ನೀಡುವುದನ್ನು ಅವರು ಅನುಮೋದಿಸುತ್ತಾರೆಯೇ ಎಂದೂ ಕೇಳಲಾಯಿತು. ಅದಕ್ಕೂ ಮೊದಲು, 1936 ರ ಮಾರ್ಚ್ 7 ರಂದು, ಯಹೂದಿಗಳು ಮತ್ತು ರೋಮಾನಿ ಜನರ ಮತದಾನದ ಹಕ್ಕನ್ನು ಅಸಿಂಧುಗೊಳಿಸಲಾಯಿತು. 1934 ರಲ್ಲಿ ಇದ್ದಷ್ಟೇ ಪ್ರಮಾಣದ ಮತದಾರರನ್ನು ಖಚಿತಪಡಿಸಿಕೊಳ್ಳಲು ಮತ್ತು ನಾಜಿ಼ ಆಡಳಿತಕ್ಕೆ ಯುವಜನರ ಉತ್ಸಾಹಭರಿತ ಬೆಂಬಲವನ್ನು ಬಳಸಿಕೊಳ್ಳಲು ನಾಜಿ಼ಗಳು ಮತದಾನದ ವಯಸ್ಸನ್ನು ಸಹ ಕಡಿಮೆ ಮಾಡಿದರು.
ಹಾಗಾಗಿ, ಆ ಜನಮತ ಗಣನೆಯು ಮುಕ್ತವೂ ಆಗಿರಲಿಲ್ಲ, ನ್ಯಾಯ ಸಮ್ಮತವೂ ಆಗಿರಲಿಲ್ಲ. ಆದರೆ ಹಲವಾರು ಜರ್ಮನ್ನರು ಪ್ರಾಮಾಣಿಕವಾಗಿ ಮತ್ತು ಉತ್ಸುಕತೆಯಿಂದ ಹಿಟ್ಲರ್ ಹಾಗೂ ನಾಜಿ಼ ಆಡಳಿತಕ್ಕೆ ಬೆಂಬಲಿಸಿದರು. ಶೇ. 90ರಷ್ಟು ಮತದಾರರು ಹಿಟ್ಲರನ ಕ್ರಮಗಳನ್ನು ಅನುಮೋದಿಸಿದ್ದಾರೆ ಎಂದು ಫಲಿತಾಂಶವು ತೋರಿಸಿತು. ಇದರೊಂದಿಗೆ, ಆತನ ಅಧಿಕಾರಕ್ಕೆ ಕಾನೂನಾತ್ಮಕ ಅಥವಾ ಸಂವಿಧಾನಾತ್ಮಕ ಮಿತಿ ಎಂಬುದೇ ಇಲ್ಲವಾಯಿತು.
ಯಹೂದಿ ದ್ವೇಷ ಮತ್ತು ರಾಷ್ಟ್ರಾಂಧತೆಯ ಅವಳಿ ತಂತ್ರಗಾರಿಕೆ
ಹಿಟ್ಲರ್ನ ರಾಷ್ಟ್ರವಾದದ ಪ್ರಮುಖ ಅಂಶವಾಗಿದ್ದದ್ದು ಯಹೂದಿ ದ್ವೇಷ. ಜನರನ್ನು ಒಗ್ಗೂಡಿಸಲು ಅವರ ಎಲ್ಲ ಆಕ್ರೋಶವನ್ನು ಒಂದೇ ಶತ್ರುವಿನ ವಿರುದ್ಧ ತಿರುಗಿಸುವುದು ಉತ್ತಮ ಎಂದು ಆತ ಗುರುತಿಸಿದ್ದ. ಈ ಶತ್ರು ಅವರ ಎಲ್ಲ ಕಷ್ಟಗಳಿಗೆ ಕಾರಣನಾಗಿರಬೇಕು ಎಂದು ಹಿಟ್ಲರ್ ನಂಬಿದ್ದ. ಹೀಗಾಗಿ, ಸಮಾಜದ ಎಲ್ಲ ತೊಂದರೆಗಳಿಗೆ ಯಹೂದಿಗಳೇ ಕಾರಣ ಎಂದು ಹೇಳಿ ಅವರನ್ನು ಬಲಿಪಶು ಮಾಡಿದ. ಜೊತೆಗೆ, ರಾಷ್ಟ್ರೀಯ ಉನ್ಮಾದವನ್ನು ಏರಿಸುವುದರೊಂದಿಗೆ, ಕೆಳಮಧ್ಯಮ ವರ್ಗ ಮತ್ತು ಕಾರ್ಮಿಕ ವರ್ಗವನ್ನು ಆಕರ್ಷಿಸಲು ಹಿಟ್ಲರ್ ಕಾರ್ಯಕ್ರಮಗಳನ್ನು ರೂಪಿಸಿದ. ಅವು ಬಹಿರಂಗವಾಗಿ ಕ್ರಾಂತಿಕಾರಿ ಸಮಾಜವಾದದ ಗುಣವನ್ನು ನಕಲು ಮಾಡಿದ್ದವು. ಸರಿಯಾದ ರಾಜಕೀಯ ಜಾಗೃತಿಯಿಲ್ಲದ ಸಾಮಾನ್ಯ ಜರ್ಮನ್ರು, ತಮ್ಮ ಬದುಕಿನ ಅಸ್ತವ್ಯಸ್ತತೆ ಮತ್ತು ಅಭದ್ರತೆಗೆ ಕಾರಣವಾದ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸ್ಪಷ್ಟತೆ ಪಡೆಯಲಿಲ್ಲ.
ತತ್ಪರಿಣಾಮವಾಗಿ, ಅವರು ಹಿಟ್ಲರನ ಚಿತ್ತಾಕರ್ಷಕ ಪ್ರಚಾರದ ಅಬ್ಬರಕ್ಕೆ ಸುಲಭವಾಗಿ ಬಲಿಯಾದರು. ಅದೇ ಸಮಯದಲ್ಲಿ, ಜರ್ಮನಿಯ ವಾಸ್ತವಿಕ ಪರಿಸ್ಥಿತಿಯು ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಗೆ ವೇದಿಕೆಯು ಸಿದ್ಧವಾಗಿತ್ತು. ಆಡಳಿತಾರೂಢ ಜರ್ಮನ್ ಬೂರ್ಜ್ವಾ ವರ್ಗದ ಅತ್ಯಂತ ನಂಬಲರ್ಹ ರಾಜಕೀಯ ನಿರ್ವಾಹಕನಾಗಿದ್ದ ಹಿಟ್ಲರ್ ಇದನ್ನು ಗ್ರಹಿಸಿದ್ದ. ಹೀಗಾಗಿ, ಅಂತಹ ಕ್ರಾಂತಿಯ ಸಾಧ್ಯತೆಯು ವಾಸ್ತವದಲ್ಲಿ ನಿಜವಾಗದಂತೆ ತಡೆಗಟ್ಟಲು ಅವನು ಫ್ಯಾಷಿವಾದದ ಮೂಲಕ ಪ್ರಯತ್ನಿಸಿದ.
ಜರ್ಮನ್ ಬಂಡವಾಳಶಾಹಿಗಳ ಒಟ್ಟಾರೆ ಹಿತ ಕಾಯುವ ಪಣ ತೊಟ್ಟ ಹಿಟ್ಲರ್
ಜರ್ಮನ್ ಬೂರ್ಜ್ವಾಗಳು ಅವನಲ್ಲಿ ತಮ್ಮ ಒಟ್ಟು ವರ್ಗ ಹಿತಾಸಕ್ತಿಗಳನ್ನು ರಕ್ಷಿಸಬಲ್ಲ ಏಕೈಕ ರಾಜಕೀಯ ಶಕ್ತಿಯನ್ನು ಕಂಡುಕೊಂಡರು. ಜರ್ಮನ್ ಬಂಡವಾಳಶಾಹಿ ವರ್ಗದ ಒಟ್ಟು ಹಿತಾಸಕ್ತಿಗಳನ್ನು ಪೂರೈಸಲು, ಹಿಟ್ಲರ್ ಎಲ್ಲಾ ಸಣ್ಣ ಬಂಡವಾಳದ ಹಿಡುವಳಿಗಳನ್ನು ವಿಸರ್ಜಿಸಿದನು ಮತ್ತು ಏಕಸ್ವಾಮ್ಯ ಬಂಡವಾಳದ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಿದನು. ಇದರ ಪರಿಣಾಮವಾಗಿ, ರಾಷ್ಟ್ರೀಯ ಮಟ್ಟದಲ್ಲಿ ಏಕಸ್ವಾಮ್ಯ ಬಂಡವಾಳಶಾಹಿಗಳ ಲಾಭವು 1932 ರಲ್ಲಿ 175 ದಶಲಕ್ಷ ಡಾಯಿಷ್ ಮಾರ್ಕ್ ಗಳಿಂದ 1935 ರಲ್ಲಿ 5 ಶತಕೋಟಿ ಮಾರ್ಕ್ಗಳಿಗೆ ಏರಿತು, ಆದರೆ ಜೀವನ ವೆಚ್ಚ ಹೆಚ್ಚಾಗಿದ್ದರೂ ಸಹ ಕಾರ್ಮಿಕರ ವೇತನವನ್ನು ಮತ್ತಷ್ಟು ಕಡಿಮೆ ಮಾಡಲಾಯಿತು. ಇದು ಹಿಟ್ಲರ್ನ ಹುಸಿ ಸಮಾಜವಾದದ ಮಾದರಿ. ಹಿಟ್ಲರ್ ತನ್ನ ಪಕ್ಷದ ಅನುಯಾಯಿಗಳನ್ನು ಮತ್ತು ಜರ್ಮನ್ ಜನರನ್ನು ತಾನೇ ಸರ್ವೋಚ್ಚ ನಾಯಕನೆಂದು, ದೋಷರಹಿತನೆಂದು, ವರ್ಗಾತೀತನೆಂದು ಮತ್ತು ವಿಮರ್ಶೆಯನ್ನು ಮೀರಿದವನೆಂದು ಜನರು ನಂಬುವಂತೆ ಮಾಡುವಲ್ಲಿ ಯಶಸ್ವಿಯಾದನು. ಅವನು ರಾಷ್ಟçದ ರಕ್ಷಕನಾಗಿದ್ದನು, ದೈವಿಕ ಇಚ್ಛೆಯನ್ನು ಪ್ರತಿನಿಧಿಸುತ್ತಿದ್ದನು, ಸ್ವಾತಂತ್ರ್ಯ, ಹಕ್ಕು, ನ್ಯಾಯ ಮತ್ತು ನೈತಿಕತೆಯ ಮಾನವ ಪರಿಕಲ್ಪನೆಗಳಿಗೆ ಅವನು ಬದ್ಧನಾಗ ಬೇಕಿರಲಿಲ್ಲ, ಎಲ್ಲರೂ ಅವನನ್ನು ಕಣ್ಣುಮುಚ್ಚಿಕೊಂಡು ಅನುಸರಿಸಬೇಕು ಮತ್ತು ಆತನ ಆಜ್ಞೆಯನ್ನು ಪಾಲಿಸಬೇಕು. ಸೂಪರ್ಮ್ಯಾನ್ ಮತ್ತು ಸರ್ವೋಚ್ಚ ತೀರ್ಪುಗಾರನಾಗಿ ನಾಯಕನ ಈ ಆರಾಧನೆಯು ನಿಗ್ರಹ ಮತ್ತು ಮನವೊಲಿಕೆಯ ನೀತಿಯೊಂದಿಗೆ ಫ್ಯಾಷಿವಾದದ ಒಂದು ವಿಶಿಷ್ಟ ಗುಣಲಕ್ಷಣವಾಗಿದೆ.
ಅಂದಿನಿಂದ, ಯುದ್ಧದ ಕಾರ್ಮೋಡಗಳು ಕವಿಯಲಾರಂಭಿಸಿದವು. ಆದರೆ, ಹಿಟ್ಲರ್ನ ನೈಜ ಉದ್ದೇಶದ ವ್ಯಾಪ್ತಿಯನ್ನು ಅಳೆಯಲು ಸಾಧ್ಯವಾಗದ ಬ್ರಿಟನ್, ಫ್ರಾನ್ಸ್ ಮತ್ತು ಇಟಲಿ 1938ರಲ್ಲಿ ಮ್ಯೂನಿಚ್ನಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಿದವು, ಇದು ನಾಜಿ ಜರ್ಮನಿಗೆ ಜರ್ಮನ್ ಮಾತನಾಡುವ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಚೆಕೊಸ್ಲೊವಾಕಿಯಾದ ಸುಡೆಟೆನ್ಲ್ಯಾಂಡ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಬ್ರಿಟನ್ ಮತ್ತು ಫ್ರಾನ್ಸಿನ ಓಲೈಕೆಯ ನೀತಿಯಿಂದ ಪ್ರೇರಿತವಾದ ಈ ನಿರ್ಧಾರವು ದೊಡ್ಡ ಪ್ರಮಾಣದ ಯುದ್ಧವನ್ನು ತಡೆಯುವ ದೃಷ್ಟಿಯಿಂದ ವಿಫಲವಾಯಿತು. ಏಕೆಂದರೆ ಹಿಟ್ಲರ್ ತನ್ನ ಪ್ರಾದೇಶಿಕ ವಿಸ್ತರಣೆಯ ನೀತಿಯನ್ನು ಮುಂದುವರಿಸಿದ.
ಹಿಟ್ಲರ್ ಜೊತೆಗೆ ಸೇರಿದ ಇಟಲಿ ಮತ್ತು ಜಪಾನ್
ಮತ್ತೊಂದೆಡೆ, ಮೊದಲನೆಯ ಮಹಾಯುದ್ಧದ ನಂತರ ಇಟಲಿಯಲ್ಲಿ ಫ್ಯಾಷಿಸ್ಟ್ ಪಕ್ಷವನ್ನು ರಚಿಸಿದ ಬೆನಿಟೊ ಮುಸೊಲಿನಿ 1922ರಲ್ಲಿ ಇಟಲಿಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿದ್ದ ಮತ್ತು “ರಾಜ್ಯ ಮತ್ತು ಅದರ ಎಲ್ಲಾ ರೂಪಗಳನ್ನು ಕೆಡವಿ ಹಾಕಿ” ಎಂಬ ಘೋಷಣೆಯನ್ನು ಮೊಳಗಿಸಿದ. ಅದರಂತೆ, ಅವನು ಪ್ರಜಾಸತ್ತಾತ್ಮಕ ಸರ್ಕಾರದ ಸಂಸ್ಥೆಗಳನ್ನು ನಾಶ ಮಾಡಿದ ಮತ್ತು 1925ರಲ್ಲಿ ತನ್ನನ್ನು ತಾನೆ ‘ಸರ್ವಾಧಿಕಾರಿ’ ಎಂದು ಘೋಷಿಸಿಕೊಂಡ. ಅವನ ರಾಜಕೀಯ ವಿರೋಧಿಗಳನ್ನು ಬೆದರಿಸಲು, ‘ಕಪ್ಪು ಅಂಗಿ ದಳ’ ಎಂಬ ಶಸ್ತ್ರಸಜ್ಜಿತ ಗೂಂಡಾಪಡೆಯನ್ನು ರಚಿಸಲಾಯಿತು. 1935ರಲ್ಲಿ ಅಬಿಸ್ಸಿನಿಯಾವನ್ನು(ಈಗ ಇಥಿಯೋಪಿಯಾ) ಆಕ್ರಮಿಸಿಕೊಂಡ ನಂತರ ಮತ್ತು ಸ್ಪಾನಿಷ್ ಅಂತರ್ಯುದ್ಧದಲ್ಲಿ ಸರ್ವಾಧಿಕಾರಿ ಫ್ರಾಂಕೋಗೆ ಮಿಲಿಟರಿ ಬೆಂಬಲವನ್ನು ನೀಡಿದ ನಂತರ ಅವನು 1939ರಲ್ಲಿ ಹಿಟ್ಲರ್ನೊಂದಿಗೆ ಕೈಜೋಡಿಸಿದ. ಜಪಾನ್, ಅಧಿಕೃತವಾಗಿ 27 ಸೆಪ್ಟೆಂಬರ್ 194ರಂದು ಜರ್ಮನಿ ಮತ್ತು ಇಟಲಿಯೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಫ್ಯಾಷಿಸ್ಟ್ ಕೂಟವನ್ನು ಸೇರಿಕೊಂಡಿತು.
(ಮುಂದುವರಿಯಲಿದೆ)