
ಭಾರತದ ಆರೋಗ್ಯ ವ್ಯವಸ್ಥೆಯನ್ನು ಅಸ್ವಸ್ಥಗೊಳಿಸುತ್ತಿರುವ ನಕಲಿ ಔಷಧಿಗಳ ಹಾವಳಿ; ಗಗನಕ್ಕೇರುತ್ತಿರುವ ಔಷಧದ ಬೆಲೆ!
ಭಾರತವೀಗ ಕಲಬೆರಕೆ ಹಾಗೂ ಕಳಪೆ ದರ್ಜೆಯ ಔಷಧಿಗಳ ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ! ಈ ಸಾಧನೆಯ ಹಿಂದೆ ಕೇವಲ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಷ್ಟೆಯೋ ಅಥವಾ ಸರ್ಕಾರ, ಆಡಳಿತ ಮತ್ತು ಫಾರ್ಮಾ ಮಾಫಿಯಾಗಳ ಪರಸ್ಪರ ಸಂಬಂಧವೇನಾದರೂ ಇದೆಯೋ ಎಂಬುದೇ ಒಂದು ಗಂಭೀರವಾದ ಪ್ರಶ್ನೆ. ಕಲಬೆರಕೆ ಔಷಧಿಗಳಿಂದಾಗುವ ಪ್ರಾಣಹಾನಿಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಕಳವಳಕಾರಿಯಾದ ಬೆಳವಣಿಗೆಯಾಗಿದೆ.
ಇತ್ತಿಚಿನ ಕೆಲವು ಪ್ರಕರಣಗಳನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಕಳೆದ ವರ್ಷ ಕರ್ನಾಟಕದ ವಿವಿಧ ಜಿಲ್ಲಾ ಅಸ್ಪತ್ರೆಗಳಲ್ಲಿ ಸರಣಿ ಬಾಣಂತಿ ಸಾವುಗಳು ವರದಿಯಾಗಿದ್ದವು. ಆರೋಗ್ಯವಂತರಾಗಿದ್ದ ತಾಯಂದಿರು, ಅಕಾರಣವಾಗಿ ಅಸ್ವಸ್ಥರಾಗಿ ಅಸು ನೀಗುತ್ತಿದ್ದರು. ತನಿಖೆಯಲ್ಲಿ ಕಂಡುಬಂದ ಅಂಶವೆಂದರೆ, ತಾಯಂದಿರಿಗೆ ನೀಡುತ್ತಿದ್ದ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಲುಷಿತವಾಗಿತ್ತು. ಪಶ್ಚಿಮ್ ಬಂಗಾ ಎನ್ನುವ ಕಂಪನಿಯಿಂದ ಸರಬರಾಜಾಗುತ್ತಿದ್ದ ಇದೇ, ತಾಯಂದಿರ ಸಾವಿಗೆ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಕರ್ನಾಟಕ ಸರ್ಕಾರವು, ಸದರಿ ಕಂಪನಿಯ ಬಗ್ಗೆ ಬಂಗಾಳದ ಸರ್ಕಾರಕ್ಕೆ ಈ ವಿಷಯ ತಿಳಿಸಿದ್ದರೂ ಸಹ, ಬಂಗಾಲದಲ್ಲಿ ಈ ಔಷಧಗಳ ಉಪಯೋಗ ಹಾಗೇ ಮುಂದುವರೆಯಿತು. ಇತ್ತೀಚೆಗಷ್ಟೇ, ಪಶ್ಚಿಮ ಬಂಗಾಳದ ಮೇದಿನಿಪುರ ಮೆಡಿಕಲ್ ಕಾಲೇಜಿನಲ್ಲಿ ಗರ್ಭಿಣಿಯೊಬ್ಬರು ಇದೇ ಕಂಪನಿಯ ರಿಂಗರ್ ಲಾಕ್ಟೇಟ್ನಿಂದಾಗಿ ಮರಣಹೊಂದಿದರು. ಆರಂಭದಲ್ಲಿ, ಕಾರ್ಯನಿರತ ವೈದ್ಯರ ಮೇಲೆ ತಪ್ಪನ್ನು ಆರೋಪಿಸಿ ಹನ್ನೆರಡು ಮಂದಿ ವೈದ್ಯರನ್ನು ಅಮಾನತು ಮಾಡಲಾಗಿತ್ತು. ಆದರೆ, ಕಾರಣೀಭೂತ ಕಂಪನಿಯನ್ನು ವಿಚಾರಣೆಗೂ ಸಹ ಕರೆದಿರಲಿಲ್ಲ. ನಂತರ, ಮೆಡಿಕಲ್ ಸರ್ವಿಸ್ ಸೆಂಟರ್, ಸರ್ವಿಸ್ ಡಾಕ್ಟರ್ಸ್ ಫೋರಂ, ಅಸ್ಪತಾಲ್ ಒ ಜನ್ ಸ್ವಾಸ್ಥ್ಯ ರಕ್ಷಾ ಸಂಘಟನ್ ಮುಂತಾದ ಸಾಮಾಜಿಕ ಸಂಘಟನೆಗಳ ನಿರಂತರ ಪ್ರತಿಭಟನಾ ಒತ್ತಡದಿಂದಾಗಿ, ಟಿಎಂಸಿ ಸರ್ಕಾರ ಆ ಕಂಪನಿಯ ಔಷಧಗಳನ್ನು ನಿಷೇಧಿಸಿತು. ಆದರೆ, ಸ್ವಲ್ಪ ದಿನಗಳ ನಂತರ, ಬಂಗಾಳದ ರಾಜ್ಯ ಪ್ರಯೋಗಾಲಯವು ಅವೇ ಕಲಬೆರಕೆ ಔಷಧಗಳನ್ನು ಪಾಸು ಮಾಡಿತು. ಈ ಎಲ್ಲಾ ಗೊಂದಲಗಳು ಆರುವ ಮುನ್ನ, ಕೇಂದ್ರ ಲ್ಯಾಬೊರೆಟರಿಯಿಂದ ರಿಂಗರ್ ಲ್ಯಾಕ್ಟೇಟ್ ಸ್ಯಾಂಪಲ್ಲುಗಳು ಗುಣಪರೀಕ್ಷೆಯಲ್ಲಿ ತೇರ್ಗಡೆಯಾಗದ ವರದಿ ಬಂದಿದೆ. ಇಷ್ಟೇ ಅಲ್ಲದೆ, ಅವಧಿ ಮುಗಿದ ಔಷಧಿಗಳನ್ನು ಅವಧಿಯ ದಿನಾಂಕವನ್ನು ಬದಲಿಸಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂಬುದೂ ತಿಳಿದುಬಂದಿದೆ. ಒಟ್ಟಿನಲ್ಲಿ, ನಕಲಿ, ಕಲಬೆರಕೆ ಹಾಗೂ ಕಳಪೆ ಔಷಧಗಳು ಮಾರುಕಟ್ಟೆಯನ್ನು ತುಂಬಿವೆ. ಪ್ರತಿ ಬಾರಿಯೂ ಸಾವು ಸಂಭವಿಸದಿದ್ದರೂ ರೋಗಿಗಳಲ್ಲಿ ಅನೇಕ ಬಗೆಯ ದುಷ್ಪರಿಣಾಮಗಳು ಉಂಟಾಗಬಹುದು. ಅವಶ್ಯಕತೆಗಿಂತ ಕಡಿಮೆ ಪ್ರಮಾಣದ ಸಕ್ರಿಯ ಔಷಧಾಂಶಗಳಿದ್ದರೆ, ನಿರೀಕ್ಷಿತ ಪರಿಣಾಮ ಬೀರದೆ, ಚಿಕಿತ್ಸೆ ವಿಫಲವಾಗಬಹುದು. ರೋಗನಿರೋಧಕ ಔಷಧಗಳಲ್ಲಿ ಈ ರೀತಿಯಾದರೆ, ರೋಗನಿರೋಧಕ ಪ್ರತಿರೋಧಕ ಶಕ್ತಿ (antibiotic resistance) ಹರಡಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ.
ಜನತೆಯ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದೇವೆ ಎಂದು ತಿಳಿದಿದ್ದರೂ ಇಂತಹ ನಕಲಿ ಔಷಧಗಳನ್ನು ಕಂಪೆನಿಗಳು ಏಕೆ ತಯಾರಿಸುತ್ತವೆ? ಇವುಗಳ ಅಪಾಯಕಾರಿ ಪರಿಣಾಮಗಳ ಬಗ್ಗೆ ಅವರಿಗೆ ಗೊತ್ತಿಲ್ಲವೆ? ಸಾರ್ವಜನಿಕ ಹಾಗೂ ಖಾಸಗಿ ಒಡೆತನದ ಫಾರ್ಮಾ ಕಂಪನಿಗಳಲ್ಲಿ, ಗುಣಮಟ್ಟದ ಪರಿವೀಕ್ಷಣೆಗಾಗಿ ತಜ್ಞರು ಇರುತ್ತಾರೆ ಎಂದು ಹೇಳಿಕೊಳ್ಳಲಾಗುತ್ತದೆ. ಔಷಧಗಳ ತಯಾರಿಕೆಗಾಗಿ ಬೇಕಾದ ಒಳ್ಳೆಯ ಕಚ್ಚಾ ಸಾಮಗ್ರಿಗಳನ್ನು ದೊರಕಿಸಲು ಪ್ರತ್ಯೇಕ ಸಂಶೋಧನಾ ಹಾಗೂ ಅಭಿವೃದ್ಧಿ ಇಲಾಖೆಗಳು ಕಾರ್ಯನಿರ್ವಹಿಸುತ್ತವೆ ಎಂದೂ ಹೇಳಿಕೊಳ್ಳಲಾಗುತ್ತದೆ. ಹೀಗಿದ್ದರೂ, ಇಂತಹ ಕುಕೃತ್ಯಕ್ಕೆ ಕೈಹಾಕಲು ಕಾರಣವೇನು? ಒಂದೇ ಕಾರಣವೆಂದರೆ, ಅತ್ಯಧಿಕ ಲಾಭದ ದುರುದ್ದೇಶ.
ಔಷಧಿಗಳ ಗುಣಮಟ್ಟ ಪರೀಕ್ಷಾ ವ್ಯವಸ್ಥೆಯಲ್ಲಿನ ಕೊರತೆ
ಮೊದಲನೆಯದಾಗಿ, ಭಾರತದ ಯಾವ ರಾಜ್ಯದಲ್ಲೂ ಔಷಧಿಗಳ ಗುಣಮಟ್ಟವನ್ನು ಪರಿಕ್ಷಿಸಲು ಅವಶ್ಯಕ ಸಂಖ್ಯೆಯಷ್ಟು ಸುವ್ಯವಸ್ಥಿತ ಪ್ರಯೋಗಾಲಯಗಳಿಲ್ಲ. ಇರುವ ಕೆಲವು ಲ್ಯಾಬುಗಳಲ್ಲಿ ನುರಿತ ತಂತ್ರಜ್ಞರಿಲ್ಲ ಮತ್ತು ಅವೇ ಹಳೆಯ ಉಪಕರಣಗಳನ್ನು ಬಳಸಲಾಗುತ್ತಿದೆ. ಕೆಲವು ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾತ್ರ ಈ ಲ್ಯಾಬುಗಳಲ್ಲಿ ಮಾಡಬಹುದಾಗಿದೆ. ರೋಗಾಣುಗಳ ಹಾಗೂ ರಾಸಾಯನಿಕ ಕಲಬೆರಕೆಗಳನ್ನು ಅಲ್ಲಿ ಪತ್ತೆ ಹಚ್ಚಲಾಗುವುದಿಲ್ಲ. ಜೊತೆಗೆ, ಪರೀಕ್ಷೆಯ ಪರಿಣಾಮದ ವರದಿ ಬರಲು ಕೆಲವೊಮ್ಮೆ ಆರರಿಂದ ಹನ್ನೆರಡು ತಿಂಗಳುಗಳಾಗುತ್ತವೆ. ಕಾನೂನಿನ ಪ್ರಕಾರ ಪರೀಕ್ಷೆಯ ಪರಿಣಾಮ ಬರುವವರೆಗೆ, ಔಷಧಗಳನ್ನು ಬಳಸುವ ಹಾಗಿಲ್ಲವೆಂದಿದ್ದರೂ, ಅನೇಕ ಸರ್ಕಾರಿ ಅಸ್ಪತ್ರೆಗಳಲ್ಲಿ ವರದಿ ಬರುವ ಮುನ್ನವೇ ಬಳಸಲಾರಂಭಿಸಲಾಗುತ್ತದೆ.
ಎರಡನೆಯದಾಗಿ, ಕೊನೆಯ ದಿನಾಂಕ ಮೀರಿದ ಔಷಧಿಗಳನ್ನು ೯೦ ದಿನಗಳ ಒಳಗೆ ತಯಾರಕರಿಗೆ ಮರಳಿಸಬೇಕೆಂಬ ಕಾನೂನಿದೆ. ಆದರೆ, ಬಹಳಷ್ಟು ಬಾರಿ, ಅವುಗಳನ್ನು ಕಪ್ಪು ಮಾರುಕಟ್ಟೆಯ ಮೂಲಕ ಹೊಸ ಪ್ಯಾಕೇಜಿಂಗ್ ಮಾಡಿ ಮತ್ತೊಮ್ಮೆ ಗ್ರಾಹಕರ ಬಳಕೆಗೆ ಬಿಡುಗಡೆ ಮಾಡಲಾಗುತ್ತದೆ.
ಮೂರನೆಯದಾಗಿ, ಔಷಧಿಗಳ ಮೇಲೆ ಜಿಎಸ್ಟಿ ಹೇರಿರುವುದರಿಂದ, ರಾಜ್ಯಗಳು ಅಪರಿಚಿತ ಹಾಗೂ ಅಜ್ಞಾತ ಕಂಪನಿಗಳ ಅಗ್ಗದ ದರದ ಔಷಧಿಗಳನ್ನು ಖರೀದಿಸುತ್ತಿವೆ. ಈ ಔಷಧಿಗಳ ಮೇಲೆ ಸರಿಯಾದ ಗುಣಮಟ್ಟದ ನಿಯಂತ್ರಣವಿರದೆ ಇರುವುದರಿಂದ, ಹೆಚ್ಚಾಗಿ ಕೊನೆಯ ದಿನಾಂಕ ಮೀರಿದಂತಹವಾಗಿರುತ್ತವೆ.
ನಾಲ್ಕನೆಯದಾಗಿ, ಇತ್ತೀಚೆಗೆ ಕೇಂದ್ರ ಔಷಧಿ ನಿಯಂತ್ರಣಾ ಕಛೇರಿ ವತಿಯಿಂದ ನಡೆಸಿದ ಅನಿರೀಕ್ಷಿತ ಪರೀಕ್ಷೆಯಲ್ಲಿ, ನಕಲಿ ಬ್ರಾಂಡೆಡ್ ಔಷಧಿಗಳು ಪಶ್ಚಿಮ ಬಂಗಾಲದ ಅನೇಕ ಸಗಟು ಮಾರಾಟಗಾರರ ಮಾರುಕಟ್ಟೆಯಲ್ಲಿ ಸಿಕ್ಕಿಬಿದ್ದಿವೆ. ಇದೊಂದು ಆತಂಕಕಾರಿ ವಿದ್ಯಮಾನ. ಹೀಗೆ ನಕಲಿ ಔಷಧಿಗಳನ್ನು ಬ್ರಾಂಡೆಡ್ ಹೆಸರಿನಲ್ಲಿ ಪ್ಯಾಕೇಜಿಂಗ್ ಮಾಡಿ ಮಾರಾಟ ಮಾಡಿದಲ್ಲಿ, ವಂಚನೆಯನ್ನು ಗುರುತಿಸುವುದೇ ಕಷ್ಟವಾಗಬಹುದು.
ಈ ಒಂದು ವ್ಯಾಪಕ ವಂಚನೆಯ ಜಾಲ ಒಂದೆಡೆಯಾದರೆ, ಇನ್ನೊಂದೆಡೆ, ೩೫ ದೊಡ್ಡ ದೊಡ್ಡ ಫಾರ್ಮಾ ಕಂಪನಿಗಳು ಮತಾಧಾರಿತ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಮತ್ತಿತರ ಪಕ್ಷಗಳಿಗೆ ಚುನಾವಣಾ ಬಾಂಡ್ಗಳ ಮೂಲಕ ರೂ. ೨೦,೦೦೦ ಕೋಟಿಯಷ್ಟು ದೇಣಿಗೆ ನೀಡಿವೆ. ಇದರಲ್ಲಿ, ಏಳು ಕಂಪನಿಗಳು ಈ ಬಾಂಡುಗಳ ಖರೀದಿಯ ಮುನ್ನ ಗುಣಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆ ಆಗದೇ ಇರುವಂತಹವು. ಆದರೂ, ನಕಲಿ ಔಷಧಿಗಳ ಮಾರಾಟವನ್ನು ಅವು ಮುಂದುವರಿಸುತ್ತಿವೆ. ಮತ್ತೊಂದು ಆಘಾತಕಾರಿ ಬೆಳವಣಿಗೆಯೆಂದರೆ, ಒಂದು ಲ್ಯಾಬಿನಲ್ಲಿ ಫೇಲಾದ ಪರೀಕ್ಷೆ, ಮತ್ತೊಂದು ಲ್ಯಾಬಿನಲ್ಲಿ ಪಾಸಾಗುವುದು, ಬಹುಶಃ ಇದು ಹಣ ನೀಡಿ ತಮಗೆ ಬೇಕಾದಂತಹ ವರದಿಯನ್ನು ಪಡೆಯುವ ಅನೈತಿಕ ವಿಧಾನ.
ನಕಲಿ ಔಷಧಿಗಳನ್ನು ತಯಾರಿಸುವ ಭ್ರಷ್ಟ ಫಾರ್ಮಾ ಕಂಪನಿಗಳು, ಸಗಟು ವ್ಯಾಪಾರಿಗಳು ಮತ್ತು ವಿತರಕರು ಕೂಡಿ ನಡೆಸುವ ಅವ್ಯವಹಾರವೊಂದನ್ನು ಇತ್ತೀಚಿಗೆ ಬಯಲಿಗೆಳೆಯಲಾಯಿತು. ಆದರೆ, ನಂತರ ಯಾವ ಕ್ರಮ ಕೈಗೊಳ್ಳಲಾಯಿತು ಎಂಬುದು ಸ್ಪಷ್ಟವಾಗಿಲ್ಲ. ಜಗತ್ತಿನ ಮೂರನೇ ಒಂದು ಭಾಗದಷ್ಟು ನಕಲಿ ಔಷಧಿಗಳು ಭಾರತದಲ್ಲಿ ಉತ್ಪಾದನೆಯಾಗುತ್ತವೆ ಎಂಬುದು ನಾಚಿಕೆಗೇಡಿನ ಸಂಗತಿ. ಇಂತಹ ದಂಧೆಗಳು ರಾಜಾರೋಷವಾಗಿ ನಡೆಯುತ್ತವೆ ಎಂದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಕಟ್ಟಿ ಕುಳಿತಿರಬೇಕು, ಇಲ್ಲ ಅವರೂ ಈ ಅಪರಾಧದಲ್ಲಿ ಭಾಗಿದಾರರಾಗಿರಬೇಕು.
ಔಷಧಿ ದರಗಳ ಮೇಲಿನ ನಿಯಂತ್ರಣದ ರದ್ದತಿ
1960ರ ವರೆಗೆ, ಔಷಧಿಗಳ ದರಗಳು ಕಟ್ಟುನಿಟ್ಟಿನ ನಿಯಂತ್ರಣಕ್ಕೊಳಪಟ್ಟಿದ್ದವು. ರಾಷ್ಟ್ರೀಯ ಫಾರ್ಮಸ್ಯುಟಿಕಲ್ ಕಂಪನಿಗಳಾದ ಬೆಂಗಾಲ್ ಕೆಮಿಕಲ್ಸ್, ಐಡಿಪಿಎಲ್, ಕರ್ನಾಟಕ ಆಂಟಿಬಯಾಟಿಕ್ಸ್, ಹಿಂದುಸ್ತಾನ್ ಆಂಟಿಬಯಾಟಿಕ್ಸ್ ಲಿಮಿಟೆಡ್ ಮೊದಲಾದ ಸಾರ್ವಜನಿಕ ಕಂಪನಿಗಳು ಉತ್ತಮ ಗಣಮಟ್ಟದ ಔಷಧಿಗಳನ್ನು ಕೈಗೆಟಕುವ ದರದಲ್ಲಿ ಉತ್ಪಾದಿಸುತ್ತಿದ್ದವು. ಹಾಗಾಗಿ, ಸ್ವಲ್ಪ ಮಟ್ಟಿಗಾದರೂ ಜನರಿಗೆ ಸಹಾಯವಾಗುತ್ತಿತ್ತು. ಆದರೆ, ನಂತರದ ದಿನಗಳಲ್ಲಿ, ಜಾಗತೀಕರಣಕ್ಕನುಗುಣವಾದ ಬದಲಾದ ಸರ್ಕಾರಿ ನೀತಿಗಳಿಂದಾಗಿ, (ವಿಶೇಷವಾಗಿ 1995ರಲ್ಲಿ ಬಂದ ರಾಷ್ಟ್ರೀಯ ಹರ್ಬಲ್ ನೀತಿ), ಸರ್ಕಾರಿ ಔಷಧ ತಯಾರಿಕಾ ಘಟಕಗಳು ದುರ್ಬಲಗೊಳ್ಳುತ್ತಾ ಹೋದವು. ಅವುಗಳನ್ನು ಮುಚ್ಚುವುದು ಅಥವಾ ಅವುಗಳ ಖಾಸಗೀಕರಣಗೊಳಿಸುವುದೇ ಸರ್ಕಾರದ ಪ್ರಮುಖ ಗುರಿಯಾಯಿತು, ಇರುವ ಐದೇ ಐದು ಸರ್ಕಾರೀ ಸ್ವಾಮ್ಯದ ಫಾರ್ಮಾ ಕಂಪನಿಗಳಲ್ಲಿ, ಎರಡನ್ನು (ಐಡಿಪಿಎಲ್ -ಇಂಡಿಯನ್ ಡ್ರಗ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಹಾಗೂ ಆರ್ಡಿಪಿಎಲ್ – ರಾಜಸ್ಥಾನ್ ಡ್ರಗ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್) ಮುಚ್ಚಲು 2021 ರಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಭಾರತದ ಆರ್ಥಿಕತೆಯ ಜಾಗತೀಕರಣದ ನಂತರ, ವಿದೇಶೀ ಔಷಧ ಕಂಪನಿಗಳು, ಸರ್ಕಾರದ 100% ನೇರ ವಿದೇಶಿ ಬಂಡವಾಳ ನೀತಿಯ ಪರಿಣಾಮದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತವನ್ನು ಪ್ರವೇಶಿಸಿದವು. 2002ರಲ್ಲಿ ಬಂದ ರಾಷ್ಟ್ರೀಯ ಔಷಧಿ ದರ ನಿಗದಿ ನೀತಿ (National Pharmaceutical Pricing Policy) ಇದಕ್ಕೆ ಪೂರಕವಾಗಿದ್ದಲ್ಲದೆ, ಔಷಧಗಳ ಬೆಲೆಗಳ ಮೇಲಿದ್ದ ನಿಯಂತ್ರಣವನ್ನು ಸಡಿಲಿಸಲಾಯಿತು. ಫಾರ್ಮಾ ಕಂಪನಿಗಳೇ ತಮಗೆ ಬೇಕಾದಂತೆ ದರಗಳನ್ನು ನಿಗದಪಡಿಸಲು ಇದು ಅನುವಾಯಿತು. ಹಾಗಾಗಿಯೇ, ಇಂದು ಬಹುತೇಕ ಜನರಿಗೆ ಸುಲಭ ದರದಲ್ಲಿ ಔಷಧಿಗಳು ದೊರೆಯುತ್ತಿಲ್ಲ. ಒಂದು ಅಧ್ಯಯನದ ಪ್ರಕಾರ ವರ್ಷಕ್ಕೆ 55 ದಶಲಕ್ಷ ಭಾರತೀಯರು ವೈದ್ಯಕೀಯ ಖರ್ಚಿನಿಂದಾಗಿ ಬಡತನ ರೇಖೆಯ ಕೆಳಗಡೆ ತಳ್ಳಲ್ಪಡುತ್ತಾರೆ. ಅದರಲ್ಲಿ ಹೆಚ್ಚಿನಂಶ ಔಷಧಿಗಳ ಮೇಲೆ ಮಾಡಿದ ವೆಚ್ಚ (ಚಿಕಿತ್ಸೆಯ ಒಟ್ಟು ಖರ್ಚಿನಲ್ಲಿ ಶೇಕಡ 70 ರಿಂದ 80 ವೆಚ್ಚವು ಔಷಧಿಗಳಿಗಾಗಿಯೇ ಆಗುತ್ತದೆ). ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆಯ ಆರಂಭದ ವರ್ಷ, 2014 ರಲ್ಲಿ, ಪ್ರಧಾನಿಗಳ ಅಮೆರಿಕಾ ಪ್ರವಾಸದ ಮುನ್ನ 108 ಔಷಧಿಗಳನ್ನು ಡಿಪಿಸಿಒ (ಡ್ರಗ್ ಪ್ ರೊಸೆಸ್ ಕಂಟ್ರೋಲ್ ಆರ್ಡರ್)ನಿಂದ ಹೊರತೆಗೆಯಲಾಯಿತು. ಅಮೆರಿಕಾ ಒತ್ತಡಕ್ಕೆ ಮೋದಿ ಸರ್ಕಾರ ಮಣಿದು ಈ ನಿರ್ಧಾರ ತೆಗೆದುಕೊಂಡಿದ್ದು ನಿಚ್ಚಳವಾಗಿದೆ. ಇದರಿಂದಾಗಿ, ಮಧುಮೇಹ, ಕ್ಯಾನ್ಸರ್, ಟಿಬಿ ಮುಂತಾದ ಗಂಭೀರ ಕಾಯಿಲೆಗಳಿಗೆ ಅತ್ಯವಶ್ಯವಾದ ಔಷಧಿಗಳ ಬೆಲೆ ಗಗನಕ್ಕೇರಿತು. ಉದಾಹರಣೆಗೆ, ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ಗ್ಲಿವೆಕ್ ಎನ್ನುವ ಔಷಧಿಯ ಬೆಲೆ ರೂ.8500 ಇದ್ದದ್ದು, ಸೆಪ್ಟೆಂಬರ್ 2014ರ ನಂತರ ರೂ. 1 ಲಕ್ಷಕ್ಕೆ ಏರಿತ್ತು. ಈಗಲೂ ಸಹ, ಅದೆಷ್ಟೋ ಅವಶ್ಯಕ ಔಷಧಿಗಳು ಮತ್ತು ಹೆಚ್ಚಾಗಿ ಬಳಸುವ ಸಾಮಾನ್ಯ ಔಷಧಿಗಳು ನ್ಯಾಷನಲ್ ಲಿಸ್ಟ್ ಆಫ್ ಎಸೆನ್ಶಿಯಲ್ ಮೆಡಿಸಿನ್ (ಓಐಇಒ) ನಲ್ಲಿ ಇಲ್ಲ. ಪಟ್ಟಿಯನ್ನು ಪರಿಷ್ಕರಿಸದೆ, ಸರ್ಕಾರ, ಕಂಪನಿಗಳು ಮತ್ತಷ್ಟು ಲಾಭ ಗಳಿಸಲು ಅನುವು ಮಾಡಿಕೊಟ್ಟಿದೆ.
ಮಿತಿಯಿಲ್ಲದ ಲಾಭ ಗಳಿಕೆಯಲ್ಲಿ ಫಾರ್ಮಾ ಉದ್ಯಮ
ಉತ್ಪಾದನೆ ಮತ್ತಿತರ ಉದ್ಯಮ ಕ್ಷೇತ್ರಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವಾಗ, ಫಾರ್ಮಾ ಕ್ಷೇತ್ರವು ಮಿತಿಯಿಲ್ಲದ ಲಾಭವನ್ನು ಬಾಚುತ್ತಿದೆ, 300% ನಿಂದ ನಂಬಲಸಾಧ್ಯವಾದ 3000% ವರೆಗೆ ಲಾಭ ಪಡೆಯುತ್ತಿವೆ. ಸ್ವತಃ ಸರ್ಕಾರವೇ ಪ್ರತಿ ವರ್ಷ ದರವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತಿದೆ. ಇದರ ಜೊತೆಗೆ, ಅವು ಕಲಬೆರಕೆ, ನಕಲಿ ಔಷಧಿಗಳ ಮಾರಾಟದಿಂದ ಹೆಚ್ಚೆಚ್ಚು ಲಾಭ ಗಳಿಸುವ ಪೈಪೋಟಿಯಲ್ಲಿ ನಿರತವಾಗಿವೆ. ಮನುಷ್ಯ ಜೀವದೊಂದಿಗೆ ಚೆಲ್ಲಾಟವಾಡಬಾರದೆಂಬ ಯಾವುದೇ ಬಗೆಯ ನೈತಿಕತೆಯನ್ನು ಕೈಬಿಟ್ಟಂತೆ ಅವು ವರ್ತಿಸುತ್ತಿವೆ. ವೇಗವಾಗಿ ಅಧಪತನಗೊಳ್ಳುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಾನವೀಯ ಭಾವನೆಗಳ ಬಗ್ಗೆ ಯಾವ ಕಾಳಜಿಯಿರುತ್ತದೆ!
ಡ್ರಗ್ ಮಾಫಿಯಾವನ್ನು ಹಿಮ್ಮೆಟ್ಟಿಸಬೇಕಿದೆ!
ವೈದ್ಯಕೀಯ ನೈತಿಕತೆಯ ಪತಾಕೆಯನ್ನು ಎತ್ತಿಹಿಡಿವ ವೈದ್ಯ ಸಮೂಹವನ್ನು ಸೇರಿಸಿಕೊಂಡು ಬೃಹತ್ ಆರೋಗ್ಯ ಚಳುವಳಿಯನ್ನು ಕಟ್ಟುವ ಸಮಯ ಬಂದಿದೆ. ಸರ್ಕಾರಗಳ ಮುಂದೆ ನಾವು ಈ ಒತ್ತಾಯಗಳನ್ನು ಇಟ್ಟುಕೊಂಡು ಚಳುವಳಿ ಮುಂದುವರೆಸಬೇಕಿದೆ :
• ಹಾಥಿ ಸಮಿತಿಯ ಶಿಫಾರಸ್ಸಿನಂತೆ ಬ್ರಾಂಡೆಡ್ ಔಷಧಿಗಳ ಮಾರಾಟವನ್ನು ನಿಲ್ಲಿಸಿ. ಎಲ್ಲಾ ಅವಶ್ಯಕ ಮತ್ತು ಜೀವ ರಕ್ಷಕ ಔಷಧಿಗಳನ್ನು ದರ ನಿಯಂತ್ರಣದಡಿ ಸೇರಿಸಿ.
• ರಾಷ್ಟ್ರೀಯ ಉತ್ಪಾದನಾ ಘಟಕಗಳನ್ನು ಪುನಶ್ಚೇತನಗೊಳಿಸಿ ಮತ್ತು ಎಲ್ಲಾ ಅವಶ್ಯಕ ಹಾಗೂ ಜೀವರಕ್ಷಕ ಔಷಧಿಗಳನ್ನು ಉತ್ಪಾದಿಸಿ.
• ಫಾರ್ಮಾ ಕಂಪನೆಗಳು ಅತಿಹೆಚ್ಚು ಲಾಭಗಳಿಸದಂತೆ, ಲಾಭದ ಮೇಲೆ ಮಿತಿಯನ್ನು ಹೇರಿ.
• ಅವಶ್ಯಕ ಮತ್ತು ಜೀವರಕ್ಷಕ ಔಷಧಿಗಳನ್ನು ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳ ಮೂಲಕ ಸುಲಭವಾಗಿ ಮತ್ತು ತಡೆರಹಿತವಾಗಿ ದೊರೆಯುವಂತೆ ಮಾಡಿ
• ಔಷಧಿ ಪರೀಕ್ಷಾ ಕೇಂದ್ರಗಳ ಗುಣಮಟ್ಟವನ್ನು ಹೆಚ್ಚಿಸಿ, ಅವಶ್ಯವಾದ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸಿ.