
ನೂತನ ವಲಸೆ ಮತ್ತು ವಿದೇಶಿಯರ ಮಸೂದೆ 2025: ಸಿಎಎಯ ಕರಾಳ ನೆರಳು
“ಭಾರತವು ಧರ್ಮಶಾಲೆ ಅಲ್ಲ. ಸೆಕ್ಷನ್ 3ರ ಅಡಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗುವ ಯಾರಿಗಾದರೂ ಪ್ರವೇಶ ನಿರಾಕರಿಸುವ ಅವಕಾಶವಿದೆ. ಈಗ ಕಪ್ಪು ಪಟ್ಟಿಗೆ ಕಾನೂನು ಬೆಂಬಲವಿದೆ” ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ವಿದೇಶಿಯರಿಗಾಗಿ ತಂದಿರುವ ನೂತನ ವಲಸೆ ಮತ್ತು ವಿದೇಶಿಯರ ಮಸೂದೆ 2025 ಅನ್ನು ಕಳೆದ ಮಾರ್ಚ್ 11 ರಂದು ಲೋಕಸಭೆಯಲ್ಲಿ ಮಂಡಿಸಿದಾಗ ಪ್ರತಿಪಕ್ಷಗಳು ಅದರ ವಿರುದ್ಧ ಮಾಡಿದ ಟೀಕೆಗೆ ಉತ್ತರಿಸುತ್ತಾ ಅಮಿತ್ ಶಾ “ಪಾರ್ಸಿಗಳು ಪರ್ಷಿಯಾದಿಂದ ಭಾರತಕ್ಕೆ ಬಂದು ಇಲ್ಲಿ ಸುರಕ್ಷಿತರಾಗಿದ್ದಾರೆ. ಯಹೂದಿಗಳು ಸಹ ಇಸ್ರೇಲ್ನಿಂದ ಭಾರತಕ್ಕೆ ಬಂದರು. ಸಿಎಎ ಮೂಲಕ, ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ನಾವು ಬಾಗಿಲು ತೆರೆದಿದ್ದೇವೆ. ಭಾರತದ ಅಭಿವೃದ್ಧಿಗಾಗಿ ಬರುವವರನ್ನು ನಾವು ಸ್ವಾಗತಿಸುತ್ತೇವೆ, ಆದರೆ ಬರ್ಮಾದ ರೋಹಿಂಗ್ಯಾ ಆಗಿರಲಿ ಅಥವಾ ಬಾಂಗ್ಲಾದೇಶಿಯಾಗಿರಲಿ, ಇಲ್ಲಿ ಸಂಘರ್ಷವನ್ನು ಸೃಷ್ಟಿಸಲು ಬಂದರೆ, ನಾವು ಅವರ ವಿರುದ್ಧ ಕಠಿಣವಾಗಿ ವರ್ತಿಸುತ್ತೇವೆ” ಎಂದರು. ಮಸೂದೆಯನ್ನು ಸಮರ್ಥಿಸುವಾಗ ಅವರ ಮಾತಿನ ಒಳಾರ್ಥವಿದು.
ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಈ ಕಠಿಣ ಮಸೂದೆಯನ್ನು ಒಕ್ಕೊರಲಿನಿಂದ ವಿರೋಧಿಸಿ, ಹೆಚ್ಚಿನ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮತ್ತು ಸಾರ್ವಜನಿಕ ವಲಯ ಸಮಿತಿಗೆ (ಪಿಎಸ್ಸಿ) ಕಳುಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದವು. ಆದರೆ ತನ್ನ ಯಾವತ್ತಿನ ಸ್ವಭಾವದಂತೆ ಬಿಜೆಪಿ ಸರ್ಕಾರ ಅದಕ್ಕೆ ಕ್ಯಾರೆ ಅನ್ನಲಿಲ್ಲ.
ಈಗ ಪ್ರಶ್ನೆಯೆಂದರೆ, ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಯರ ಒಳನುಸುಳುವಿಕೆಯ ಬಗ್ಗೆ ಇಂತಹ ಸಂಶಯ ಮತ್ತು ಹಾಗೂ ಆತಂಕಗಳೇಕೆ? ರೋಹಿಂಗ್ಯಾಗಳು ಅಥವಾ ಬಾಂಗ್ಲಾದೇಶಿಗಳ ಪ್ರಶ್ನೆ ಇಲ್ಲಿ ಹೇಗೆ ಮತ್ತು ಯಾಕೆ ಪ್ರಸ್ತುತ? ಅವರು ಹುಟ್ಟಿನಿಂದ ಮುಸ್ಲಿಮರಾಗಿರುವುದರಿಂದಲೇ? ಆರ್ಎಸ್ಎಸ್-ಬಿಜೆಪಿಯ ಸಿದ್ಧಾಂತದ ಪ್ರಕಾರ, ಮುಸ್ಲಿಮರು ಆಕ್ರಮಣಕಾರರು, ಜಿಹಾದಿಗಳು, ಭಯೋತ್ಪಾದಕರು ಮತ್ತು ತೊಂದರೆ ಕೊಡುವವರು. ಆದ್ದರಿಂದ, ಅವರ ಬಗ್ಗೆ ಕಠಿಣವಾಗಿಯೇ ವರ್ತಿಸಬೇಕು. ಅದಕ್ಕಾಗಿಯೇ ಈ ವಿವಾದಾತ್ಮಕ ಮತ್ತು ಕಠಿಣ ಮಸೂದೆಯ ಚರ್ಚೆಯಲ್ಲಿ ಭಾಗವಹಿಸುವಾಗ ಅಮಿತ್ ಶಾ ತಮ್ಮ ಭಾಷಣದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ, 2019 (ಸಿಎಎ) ಉಲ್ಲೇಖಿಸಿದ್ದು.
ಸಿಎಎ ಎಂದರೇನು
2014 ರ ಡಿಸೆಂಬರ್ 31 ಕ್ಕಿಂತ ಮೊದಲು ಭಾರತಕ್ಕೆ ಆಗಮಿಸಿದ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಒದಗಿಸಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಡಿಸೆಂಬರ್ 11, 2019 ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಅರ್ಹ ಅಲ್ಪಸಂಖ್ಯಾತರು ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಅಥವಾ ಕ್ರಿಶ್ಚಿಯನ್ನರಾಗಿರಬಹುದು. ಆದರೆ ಈ ಕಾನೂನು ಇಂತಹ ಇಸ್ಲಾಮಿಕ್ ದೇಶಗಳಿಂದ ವಲಸೆ ಬಂದ ಯಾವುದೇ ಮುಸ್ಲಿಂ ವಲಸಿಗರಿಗೆ ಅಂತಹ ಅರ್ಹತೆಯನ್ನು ನೀಡುವುದಿಲ್ಲ. ಜೊತೆಗೆ, 1980 ರ ದಶಕದಿಂದ ಭಾರತದಲ್ಲಿ ವಾಸಿಸುತ್ತಿರುವ 58,000 ಶ್ರೀಲಂಕಾದ ತಮಿಳು ನಿರಾಶ್ರಿತರೂ ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡಲು ಧರ್ಮವನ್ನು ಮಾನದಂಡವಾಗಿ ಬಹಿರಂಗವಾಗಿ ಬಳಸಿದ್ದು ಇದೇ ಮೊದಲು.
ಮುಸ್ಲಿಮರನ್ನು ಹೊರಗಿಡುವ ನೆಪವಾಗಿ, ಅವರು ಇಸ್ಲಾಮಿಕ್ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಬಲಿಯಾಗಲು ಸಾಧ್ಯವಿಲ್ಲ ಎಂಬ ವಾದವನ್ನು ಮುಂದಿಡಲಾಗಿತ್ತು. ಇದು ಅರ್ಧಸತ್ಯದ ವಾದ. ಉದಾಹರಣೆಗೆ, ಇಸ್ಲಾಮಿಕ್ ಸ್ಟೇಟ್ನ (ISIS) ಅಂಗಸಂಸ್ಥೆಯಾದ ದಿ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರಾವಿನ್ಸ್ (ISKP) ಸಂಘಟನೆಯು, ಅಫ್ಘಾನಿಸ್ತಾನದಲ್ಲಿರುವ ಶಿಯಾ ಮುಸ್ಲಿಮರನ್ನು ನಿರಂತರ ಕಿರುಕುಳಕ್ಕೆ ಗುರಿಯಾಗಿಸಿದೆ. ಆದರೆ ತಾಲಿಬಾನ್ ಆಡಳಿತವು ಆತ್ಮಾಹುತಿ ದಳದ ಬಾಂಬ್ ದಾಳಿ, ಇನ್ನಿತರ ದಾಳಿಗಳ ಸಮಯದಲ್ಲಿ ಈ ಸಮುದಾಯವನ್ನು ರಕ್ಷಿಸಲು, ವೈದ್ಯಕೀಯ ನೆರವು ನೀಡಲು ಯಾವುದೇ ನಿರ್ಣಾಯಕ ಕ್ರಮವನ್ನು ತೆಗೆದುಕೊಂಡಿಲ್ಲ. ತೀವ್ರ ಆಂತರಿಕ ಮತ್ತು ಜಾಗತಿಕ ಟೀಕೆ ಮತ್ತು ದೇಶಾದ್ಯಂತ ನಿರಂತರ ಪ್ರತಿಭಟನೆಗಳ ನಡುವೆಯೂ, ಬಿಜೆಪಿ ಸರ್ಕಾರವು ಸಿಎಎ ಕಾಯ್ದೆಯನ್ನು ಜಾರಿಗೆ ತರಲು ಮೊಂಡುವಾದ ಹೂಡುತ್ತಲೇ ಇದೆ.
ಪ್ರಸ್ತುತ ವಲಸೆ ಮಸೂದೆಯ ಪ್ರಮುಖ ಅಂಶಗಳು
ವಲಸೆ ಮತ್ತು ವಿದೇಶಿಯರ ಮಸೂದೆ-2025: ಇದು ವಿದೇಶಿಗರ ವಲಸೆ, ನೋಂದಣಿ, ಕಣ್ಗಾವಲು, ಬಂಧನ ಮತ್ತು ಗಡೀಪಾರುಗಳನ್ನು ನಿಯಂತ್ರಿಸುವಲ್ಲಿ ಏಕೀಕೃತ ಚೌಕಟ್ಟನ್ನು ರೂಪಿಸುವ ಪ್ರಸ್ತಾವನೆಯನ್ನು ಹೊಂದಿದೆ. ಮಸೂದೆಯು ಹಳೆಯ ಶಾಸನಗಳನ್ನು ಒಂದುಗೂಡಿಸಿ ನವೀಕರಿಸಲು ಸಹ ಯತ್ನಿಸುತ್ತಿದೆ. ಉದಾಹರಣೆಗೆ:
ಪಾಸ್ಪೋರ್ಟ್ ಕಾಯ್ದೆ, 1920
ವಿದೇಶಿಯರ ಕಾಯ್ದೆ, 1939
ವಿದೇಶಿಯರ ಕಾಯ್ದೆ, 1946
ವಲಸೆ (ವಾಹಕರ ಹೊಣೆಗಾರಿಕೆ) ಕಾಯ್ದೆ, 2000
ಈ ಮಸೂದೆಯನ್ನು ಭಾರತದಲ್ಲಿ ವಲಸೆ ಆಡಳಿತದ ನಿರ್ಣಾಯಕ ಅಂಶಗಳನ್ನು ತಿಳಿಸುವ 6 ಅಧ್ಯಾಯಗಳಲ್ಲಿ ಹರಡಿರುವ 36 ಕಲಮುಗಳಾಗಿ ವಿಂಗಡಿಸಿ ರಚಿಸಲಾಗಿದೆ. ಈ ಅಧ್ಯಾಯಗಳು ವಿಸ್ತಾರವಾದ ವಿಷಯ ವ್ಯಾಪ್ತಿಯನ್ನು ಹೊಂದಿದ್ದು, ವ್ಯಾಖ್ಯಾನಗಳು ಮತ್ತು ಸಾಮಾನ್ಯ ನಿಬಂಧನೆಗಳು, ವಿದೇಶಿಯರ ನಿಯಂತ್ರಣ ಮತ್ತು ನೋಂದಣಿ, ಜಾರಿ ಕಾರ್ಯವಿಧಾನಗಳು, ವೀಸಾ ವಿಧಗಳು ಮತ್ತು ಷರತ್ತುಗಳು, ಪ್ರಮುಖ ವಲಸೆ ಅಧಿಕಾರಿಗಳ ನೇಮಕ ಮತ್ತು ಕಾರ್ಯಗಳು, ಗಡೀಪಾರಿಗಾಗಿ ಕಾನೂನು ಕಾರ್ಯವಿಧಾನಗಳನ್ನು ಒಳಗೊಂಡಿದೆ. ಆದರೆ ಇದರಲ್ಲಿ ಹಿಂದೆ ವಿದೇಶಿಯರ ಕಾಯ್ದೆ 1946 ರಲ್ಲಿ ವಿದೇಶಿಯರಿಗಿದ್ದ ಯಾವುದೇ ನಿರ್ದಿಷ್ಟ ಹಕ್ಕುಗಳಿಲ್ಲ.
1946 ರ ವಿದೇಶಿಯರ ಕಾಯ್ದೆ 19 ನೇ ವಿಧಿಯ ಪ್ರಕಾರ, ವಿದೇಶಿಯರಿಗೆ ಕೆಳಗಿನ ಹಕ್ಕುಗಳನ್ನು ನೀಡಿತ್ತು: ಅ) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ,ಆ) ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತವಾಗಿ ಸೇರುವುದು, ಇ) ಸಂಘಗಳು ಮತ್ತು ಒಕ್ಕೂಟಗಳನ್ನು ರಚಿಸುವುದು, ಈ) ಭಾರತದಾದ್ಯಂತ ಮುಕ್ತವಾಗಿ ಓಡಾಡುವುದು, ಉ) ಭಾರತದ ಯಾವುದೇ ಭಾಗದಲ್ಲಿ ವಾಸಿಸುವುದು ಅಥವಾ ನೆಲೆಸುವುದು, ಊ) ಕಾನೂನಿನ ಮುಂದೆ ಸಮಾನತೆಯನ್ನು ಹೊಂದುವುದು ಮತ್ತು ಋ) ಯಾವುದೇ ಭಾರತೀಯ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವುದು.
ಆದರೆ ಪ್ರಸ್ತುತ ವಲಸೆ ಮಸೂದೆಯು ಮೇಲೆ ತಿಳಿಸಿದ ಹಕ್ಕುಗಳಿಗೆ ತಿಲಾಂಜಲಿ ನೀಡಿದೆ. ಈ ಮಸೂದೆಯ ಹೊಸ ವೈಶಿಷ್ಟ್ಯವೆಂದರೆ, ರಾಷ್ಟ್ರೀಯ ವಲಸೆ ಪ್ರಾಧಿಕಾರ ಎಂಬ ಶಾಸನಬದ್ಧ ಅತ್ಯುನ್ನತ ಸಂಸ್ಥೆಯನ್ನು ರಚಿಸುವುದು, ಇದು ವಿದೇಶಿ ಪ್ರಜೆಗಳ ಕೇಂದ್ರೀಕೃತ ಡಿಜಿಟಲ್ ಡೇಟಾಬೇಸ್ ಮತ್ತು ವಲಸೆ ನೀತಿಗೆ ಸಂಬಂಧಿಸಿದ ಎಲ್ಲವನ್ನೂ ನಿರ್ವಹಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬ ವಿದೇಶಿಯರೂ ಎನ್ಐಎ ಡಿಜಿಟಲ್ ಕಣ್ಗಾವಲಿನಲ್ಲಿರುತ್ತಾರೆ.
ಮಸೂದೆಯಲ್ಲಿ ಪುನರ್ರಚಿಸಲಾದ ವೀಸಾ ವ್ಯವಸ್ಥೆ
ಮಸೂದೆಯು ವಿದೇಶಿಯರಿಗೆ ನೀಡಲಾಗುವ ವೀಸಾಗಳನ್ನು ಈ ಕೆಳಗಿನಂತೆ ವರ್ಗೀಕರಿಸಿದೆ:
1. ವ್ಯಾಪಾರ ವೀಸಾ ಪ್ಲಸ್: ದೀರ್ಘಕಾಲವಿರುವ ವ್ಯಾಪಾರಿ ಪ್ರಯಾಣಿಕರಿಗೆ ಫಾಸ್ಟ್ಟ್ರ್ಯಾಕ್ ಕ್ಲಿಯರೆನ್ಸ್ ಮತ್ತು ಸರಳ ವ್ಯವಸ್ಥೆ
2. ಸ್ಟಾರ್ಟ್ಅಪ್ ವೀಸಾ: ಭಾರತದಲ್ಲಿ ಹೊಸನಮೂನೆಯ ಉದ್ದಿಮೆ ಸ್ಥಾಪಿಸ ಬಯಸುವ ಉದ್ದಿಮೆದಾರರಿಗೆ.
3. ಕೌಶಲ್ಯಪೂರ್ಣ ಪ್ರತಿಭಾ ವೀಸಾ: ಎಐ, ಜೈವಿಕ ತಂತ್ರಜ್ಞಾನ, ನವೀಕರಿಸುವ ಶಕ್ತಿ, ಮುಂತಾದ ಆದ್ಯತೆಯ ಕ್ಷೇತ್ರಗಳ ಪರಿಣಿತರಿಗೆ.
4. ಹೂಡಿಕೆದಾರರ ವೀಸಾ “ಭಾರತದ ಉದ್ದಿಮೆಗಳಲ್ಲಿ ಅಥವಾ ಮೂಲಭೂತ ಸೌಕರ್ಯಗಳಲ್ಲಿ ದೊಡ್ಡ ಮೊತ್ತವನ್ನು ಹೂಡುವ ವಿದೇಶಿಯರಿಗೆ.
5. ಸಾರಿಗೆ ವೀಸಾ ಮತ್ತು ಡಿಜಿಟಲ್ ಅಲೆಮಾರಿ ವೀಸಾ: ಜಾಗತಿಕ ಪ್ರಯಾಣ ಬೆಳೆಯುವ ಲಕ್ಷಣಗಳನ್ನು ಗುರುತಿಸುವುದು.
ಎಲ್ಲಾ ವೀಸಾಗಳು ಸ್ಪಷ್ಟವಾಗಿ ಕಂಡುಬರುವಂತೆ ಯಾವುದೇ ರೀತಿಯಿಂದಾದರೂ ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದ್ದು, ಮುಖ್ಯವಾಗಿ ಬಂಡವಾಳಶಾಹಿ ವರ್ಗದ ಲಾಭಕ್ಕಾಗಿ ರೂಪಿತವಾಗಿವೆ. ಈ ಮಸೂದೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವೀಸಾಗಳ ಬಗ್ಗೆ ಜಾಣ ಮೌನಧರಿಸಿದೆ!!
ವಲಸೆ ಸಿಬ್ಬಂದಿಗೆ ಅಪಾರ ಅಧಿಕಾರ
“ಭಾರತದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಪಾಯವಾಗುವ ಕಾರಣ, ಯಾವುದೇ ವಿದೇಶಿಯರಿಗೆ ಭಾರತಕ್ಕೆ ಪ್ರವೇಶಿಸಲು ಅಥವಾ ಉಳಿಯಲು ಅವಕಾಶ ಕೊಡಲು ಸಾಧ್ಯವಿಲ್ಲ ಎನ್ನುವಂತಿದ್ದರೆ ಅಂತಹವರಿಗೆ ಪ್ರವೇಶ ಕೊಡುವುದಿಲ್ಲ… ಮುಂದುವರೆದು ಹೇಳುವುದಾದರೆ, ಈ ವಿಷಯದಲ್ಲಿ ವಲಸೆ ಅಧಿಕಾರಿಯ ನಿರ್ಧಾರವು ಅಂತಿಮವಾಗಿರುತ್ತದೆ.” (ವಲಸೆ ಮಸೂದೆ, ಅಧ್ಯಾಯ 2, ಕಲಮು 3.1) ಅದಕ್ಕಾಗಿಯೇ ಮಸೂದೆಯನ್ನು ವಿರೋಧಿಸುವವರು ಹೇಳಿದ್ದು: “…ಮಸೂದೆಯು ಕೇಂದ್ರಕ್ಕೆ ಅನಿರ್ಬಂಧಿತ ಅಧಿಕಾರಗಳನ್ನು ನೀಡಿದೆ ಮತ್ತು ವಲಸೆ ಅಧಿಕಾರಿಯ ನಿರ್ಧಾರವನ್ನು ಅಂತಿಮಗೊಳಿಸಿದೆ. ಈ ನಿಬಂಧನೆಯು “ಆಪತ್ತು” ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸದೆ ಆಪತ್ತು ಉಂಟು ಮಾಡುವ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಳ್ಳಲು ವಲಸೆ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಈ ನಿಬಂಧನೆಯು ವಲಸೆ ಅಧಿಕಾರಿಗಳಿಗೆ ವಿದೇಶಿಗರ ಪಾಸ್ಪೋರ್ಟುಗಳನ್ನು ಮುಟ್ಟುಗೋಲು ಹಾಕಿಕೊಂಡು ಅವರಿಗೆ ಕಿರುಕುಳ ನೀಡುವ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ. ದುರಂತವೆಂದರೆ ಅಂತಹ ನಿರ್ಧಾರಗಳ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸುವ ಅವಕಾಶ ಇಲ್ಲ.” (ಇಂಡಿಯನ್ ಎಕ್ಸಪ್ರೆಸ್, 28.03.25) ಈ ಮಸೂದೆಯ ಅಧ್ಯಾಯ 5 ರ 26 ನೇ ವಿಧಿಯಲ್ಲಿ ‘ಬಿಎನ್ಎಸ್ಎಸ್ 2023 ರ ಸೆಕ್ಷನ್ 58 ರ ಪ್ರಕಾರ, ಹೆಡ್ ಕಾನ್ಸ್ಟೇಬಲ್ ಕೂಡ ತಪ್ಪು ಮಾಡಿದರೆನ್ನುವ ಶಂಕಿತ ವಿದೇಶಿಯರನ್ನು ಬಂಧಿಸಬಹುದು ಮತ್ತು 2 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು’ ಎಂದು ಅವಕಾಶ ನೀಡಿದೆ. ಏಕೆಂದರೆ ಯಾವುದೇ ವಲಸೆ ನ್ಯಾಯಾಧೀಶ ಇಲ್ಲದಿರುವುದರಿಂದ, ಆರೋಪಮುಕ್ತರಾಗಲು ಇರುವ ಏಕೈಕ ಮಾರ್ಗವೆಂದರೆ ಭಾರತೀಯ ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್ ಸಂಪರ್ಕಿಸುವುದು ಅಥವಾ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದು. ಸಾಮಾನ್ಯ ಅಥವಾ ಬಡ ವರ್ಗಕ್ಕೆ ಸೇರಿದ ವಿದೇಶಿಯರು ಇವುಗಳನ್ನೆಲ್ಲಾ ಅನುಸರಿಸಿ ಹೋಗಲು ಸಾಧ್ಯವೇ? ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮಸೂದೆಯು ವಿದೇಶಿಯರನ್ನು ವಿಚಾರಣೆಗೆ ಒಳಪಡಿಸುವ ಅನಿರ್ಬಂಧಿತ ಅಧಿಕಾರವನ್ನು ಸರ್ಕಾರದ ಕೈಗೆ ನೀಡಿದೆ.
ಮಸೂದೆಯಲ್ಲಿ ಸೂಚಿಸಲಾದ ಶಿಕ್ಷಾ ಕ್ರಮಗಳು
ಮಸೂದೆಯ ಅಧ್ಯಾಯ 5 ರಲ್ಲಿ ವಲಸೆ ನಿಯಮಗಳ ಉಲ್ಲಂಘನೆಗಾಗಿ ಕಠಿಣ ದಂಡನಾತ್ಮಕ ಕ್ರಮಗಳನ್ನು ಸೂಚಿಸಿದೆ. ಯೋಗ್ಯ ದಾಖಲೆಗಳಿಲ್ಲದೆ ಭಾರತಕ್ಕೆ ಬರುವ ಯಾವುದೇ ವ್ಯಕ್ತಿಗಳಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿಗಳ ದಂಡ ವಿಧಿಸಬಹುದು. ನಕಲಿ ಅಥವಾ ನಕಲಿ ದಾಖಲೆಗಳ ಬಳಕೆಗೆ 2 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು, ಜೊತೆಗೆ ಒಂದು ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದು. ವೀಸಾದಲ್ಲಿ ತೋರಿಸಿದ್ದಕ್ಕಿಂತ ಹೆಚ್ಚು ದಿನಗಳ ಕಾಲ ಇದ್ದರೆ ಅಥವಾ ವೀಸಾ ಷರತ್ತುಗಳನ್ನು ಮುರಿದರೆ 3 ವರ್ಷ ಜೈಲು ಶಿಕ್ಷೆ ಮತ್ತು 3 ಲಕ್ಷ ದಂಡ ವಿಧಿಸಲಾಗುವುದು.
ದುಡಿಯುವ ಜನಸಾಮಾನ್ಯರಿಗೆ ಮನವಿ
ಮೇಲ್ನೋಟಕ್ಕೆ, ಈ ಮಸೂದೆಯು ವಲಸೆ ಕಾರ್ಯಗಳಲ್ಲಿ, ಅದರ ಏಜೆನ್ಸಿಗಳು ಮತ್ತು ಕಾರ್ಯಕಾರಿಣಿಗಳಿಗೆ ಅಗತ್ಯವಾದ ಸಾಕಷ್ಟು ಕಾನೂನು ಬೆಂಬಲ ನೀಡುವುದರಲ್ಲಿ, ಭಾರತಕ್ಕೆ ಅಕ್ರಮ ವಲಸೆಯ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುವುದರಲ್ಲಿ ಮತ್ತು ಭಾರತದಲ್ಲಿ ಮಿತಿಮೀರಿ ವಾಸಿಸುವ ವಿದೇಶಿಯರ ಚಲನವಲನಗಳನ್ನು ಪತ್ತೆಹಚ್ಚುವುದರಲ್ಲಿ ಅನುಕೂಲವಾಗುವಂತೆ ಅನ್ನಿಸುತ್ತದೆ. ಆದರೆ ಆಳದಲ್ಲಿ ಅದು ತೋರುವಷ್ಟು ಸೌಮ್ಯವಾಗಿಲ್ಲ.
ಮಸೂದೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ಅದು ಅತಿ ಕಠಿಣ, ಅತಿ ಅನುಮಾನದ ಮತ್ತು ವಿದೇಶಿಯರು ಹಾಗೂ ವಲಸಿಗರಿಗೆ ಕಠಿಣ ಶಿಕ್ಷೆಯನ್ನು ನೀಡುವ ಮಸೂದೆಯಂತಿದೆ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ. ಮಸೂದೆಯನ್ನು ಶಾಸಕಾಂಗದಲ್ಲಿ ಮಂಡಿಸುವಾಗ ಸಿಎಎ ಬಗ್ಗೆ ಉಲ್ಲೇಖಿಸಿರುವುದು, ಈಗ ಆಡಳಿತ ಬಂಡವಾಳಶಾಹಿ ವರ್ಗದ ಸೇವೆಗೈಯುವ ಕಡು ಕೋಮುವಾದಿ ಬಿಜೆಪಿ ಸರ್ಕಾರವು ಕೆಲವು ಗುಪ್ತ ಉದ್ದೇಶಗಳನ್ನು ಹೊಂದಿದೆಯೆಂದು ತೋರಿಸುತ್ತದೆ. ಕಾನೂನು ಚೌಕಟ್ಟನ್ನು ಸುವ್ಯವಸ್ಥಿತಗೊಳಿಸುವ ಸೋಗಿನಲ್ಲಿ, ಭಾರತೀಯ ನಾಗರಿಕರಾಗಿರಲಿ, ಹಾಗೆಯೇ ವಲಸಿಗರಾಗಿರಲಿ, ನಿರ್ದಿಷ್ಟವಾಗಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವುದು ಇದರ ಉದ್ದೇಶವಾಗಿದೆ. ಎರಡನೆಯದಾಗಿ, ಎಲ್ಲರೂ ಅಕ್ರಮ ವಲಸಿಗರ ಬಗ್ಗೆ ಮಾತನಾಡುತ್ತಾರೆ. ಮೂಲ ಸಮಸ್ಯೆಗಳನ್ನು ಪರಿಹರಿಸದೇ ಅವರನ್ನು ತಾಯ್ನಾಡಿಗೆ ಓಡಿಸುವುದು ಕ್ರೂರತೆಯ ಪರಮಾವಧಿಯಾಗಿದೆ. ನೆಲೆ ಕಳೆದುಕೊಳ್ಳುವ ಅಸಹಾಯಕತೆಯ ಭಯದಿಂದ ಬದುಕುವ ಅವರು ಇನ್ನಷ್ಟು ವ್ಯಗ್ರರಾಗುವ ಸಾಧ್ಯತೆ ಇರುತ್ತದೆ. ಇದರಿಂದ ಗಲಭೆಗಳು ಭುಗಿಲೇಳಬಹುದು. ಈ ಸಂದರ್ಭದಲ್ಲಿ ಮಹಾಕವಿ ರವೀಂದ್ರನಾಥ ಟ್ಯಾಗೋರ್ ಅವರ ಪ್ರಸಿದ್ಧ ಕವಿತೆ ‘ಆಫ್ರಿಕಾ’ದ ಅಮರ ಸಾಲುಗಳು ನಮಗೆ ನೆನಪಿಗೆ ಬರುತ್ತವೆ:
ನಾಗರಿಕತೆಯ ಅಪರಿಮಿತ ಸ್ವಾರ್ಥ ಬೆತ್ತಲೆಯಾಯ್ತು ನಾಚಿಕೆಯಿಲ್ಲದ ಕ್ರೌರ್ಯದಲ್ಲಿ
ನಿನ್ನ ಮೌನ ರೋದನ ಮಂಜಿನಿಂದ ಆವೃತವಾದ ಕಾಡುಗಳಲ್ಲಿ
ರಕ್ತ, ಕಣ್ಣೀರಿನೊಂದಿಗೆ ಕಲೆತ ಮಣ್ಣು ತೇವದುಂಡೆ
ಅಸುರ ಪಾದಗಳ ಬೂಟುಗಳ ಅವಮಾನದ ಗುರುತು
ಅಳಿಸಲಾಗದಂತೆ ಮೂಡಿವೆ ನಿನ್ನ ಇತಿಹಾಸದ ಮೇಲೆ
ನಾವು ಈಗಾಗಲೇ ಗಮನಿಸುತ್ತಿರುವಂತೆ, ಆಡಳಿತಾರೂಢ ಭಾರತೀಯ ಏಕಸ್ವಾಮ್ಯವಾಧಿಪತಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗಿರುವ ಬಿಜೆಪಿ ಸರ್ಕಾರವು, ಧಾರ್ಮಿಕ ಅಥವಾ ಜಾತಿ-ಜನಾಂಗೀಯತೆಯ ಆಧಾರದಲ್ಲಿ ಸಮುದಾಯಗಳ ನಡುವೆ ಭಯದ ವಾತಾವರಣ, ರಕ್ತಪಾತ, ದ್ವೇಷವನ್ನು ಎಗ್ಗು ಸಿಗ್ಗಿಲ್ಲದೆ ನಡೆಸುತ್ತಿದೆ. ಆಗಾಗ, ಬಾಬರಿ ಮಸೀದಿ, ವಕ್ಫ್ ಕಾಯ್ದೆ ತಿದ್ದುಪಡಿ, ಔರಂಗಜೇಬನ ಸಮಾಧಿ ಅಥವಾ ಗೋರಕ್ಷಣೆಯಂತಹ ವಿಷಯಗಳನ್ನು ತಂದು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಉದ್ದೇಶಪೂರ್ವಕವಾಗಿ ಟೀಕೆ ಮಾಡಲಾಗುತ್ತದೆ. ಯಾರಿಗೆ ಗೊತ್ತು, ಈ ಪ್ರಸ್ತಾವಿತ ಮಸೂದೆ ಜಾರಿಗೆ ಬಂದರೆ, ಅವರನ್ನು ಹಣಿಯಲು ದುರುಪಯೋಗವಾಗುವುದಿಲ್ಲವೆಂದು? ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ, ವ್ಯವಹಾರದ ಹಿತಾಸಕ್ತಿ ಇತ್ಯಾದಿಗಳನ್ನು ರಕ್ಷಿಸುವ ನೆಪದಲ್ಲಿ, ಅದು ಇನ್ನೂ ಕ್ರೂರವಾಗಬಹುದು. ಈ ಮಸೂದೆಯು ದೇಶದ ಮೇಲೆ ಹೇರಲಾದ ಫ್ಯಾಸಿಸ್ಟ್ ನಿರಂಕುಶ ಪ್ರಭುತ್ವದ ಆಡಳಿತ ತತ್ವಗಳ ಒಂದು ಭಾಗವಾಗಿರಬಹುದು.
ಹೀಗಾಗಿ ದುಡಿಯುವ ಜನಸಾಮಾನ್ಯರಿಗೆ ನಮ್ಮ ಮನವಿಯೆಂದರೆ, ನಾವು ಆಳುವ ಸರ್ಕಾರದ ಮೋಸದ ಮಾತುಗಳಿಗೆ ಎಂದೂ ಬಲಿಯಾಗಬಾರದು. ಅದರ ಅಪಾಯಕಾರಿ ಸಂಚುಗಳನ್ನು ವಿಫಲಗೊಳಿಸಲು ಜೀವನದ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರಬಲ, ಐಕ್ಯ, ನಿರಂತರ ಸಾಮೂಹಿಕ ಚಳುವಳಿಯನ್ನು ಕಟ್ಟಬೇಕಾಗಿದೆ. ಅಂತಹ ಚಳುವಳಿಗಳು ಮಾತ್ರ, ಸರ್ಕಾರಗಳ ಕರಾಳ ಕಾನೂನುಗಳನ್ನು ಜಾರಿಗೊಳಿಸುವ ಹುನ್ನಾರವನ್ನು ತಡೆಯಬಹುದು.